ADVERTISEMENT

ಅಂಕೋಲೆಯ ಕವಿತೆ ಇಟಲಿಯ ಮ್ಯೂಸಿಯಂನಲ್ಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 20:39 IST
Last Updated 27 ಸೆಪ್ಟೆಂಬರ್ 2020, 20:39 IST
ಕವಿಯತ್ರಿ ರೇಣುಕಾ ರಮಾನಂದ
ಕವಿಯತ್ರಿ ರೇಣುಕಾ ರಮಾನಂದ   

ಅಂಕೋಲಾ: ಕವಿತೆ ಹಾಗೂ ವಿಶ್ವ ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಭಾರತದ 15 ಭಾಷೆಗಳ 28 ಕವಿಗಳ 250 ಕವಿತೆಗಳು ಆಯಾ ಕವಿಗಳ ಮೂಲ ಭಾಷೆಯ ಕೈಬರಹ, ಅವರದ್ದೇ ವಾಚನದ ವಿಡಿಯೊ, ಇಂಗ್ಲಿಷ್ ಅನುವಾದದ ಮೂಲಕ ಸೆ. 26 ರಂದು ಸಾರ್ವಜನಿಕವಾಗಿ ಪ್ರದರ್ಶನಗೊಂಡಿದೆ.

ಈ ಪ್ರದರ್ಶನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ, ಅಂಕೋಲೆಯ ಕವಿಯತ್ರಿ ರೇಣುಕಾ ರಮಾನಂದರ ಕನ್ನಡ ಕವಿತೆಯೂ ಇರುವುದು ವಿಶೇಷವಾಗಿದೆ.

ಇದು ಗ್ಲೋಬಲ್ ಪೊಯೆಟ್ರಿ ಪ್ಯಾಚ್ ವರ್ಕ್‌ನ ರಕ್‌ಸ್ಯಾಕ್ ಕಲಾಕವನ ಅನುಸ್ಥಾಪನಾ ಯೋಜನೆಯಾಗಿದೆ. ಇದರಲ್ಲಿ ಭಾರತದ ವೈವಿಧ್ಯತೆಯನ್ನು ಸಂಭ್ರಮಿಸುವ ಬಹುಭಾಷಿಕ ಹಾಗೂ ಪ್ರಾಂತಿಕ ವಿಚಾರ ಧ್ವನಿಸುವ ಭಾರತೀಯ ಭಾಷೆಯ ಕವಿತೆಗಳು ಒಳಗೊಂಡಿವೆ. ಇವುಗಳನ್ನು ಪ್ರಖ್ಯಾತ ಕವಿಯತ್ರಿ ಮಮತಾ ಸಾಗರ್ ಅವರು ಆಯ್ಕೆ ಮಾಡಿ ಸಂಯೋಜನೆ ಮಾಡಿದ್ದು, ಕವಿತೆಗಳು ಮ್ಯೂಸಿಯಂನಲ್ಲಿ ಸೆ. 5ರಂದು ಉದ್ಘಾಟನೆಗೊಂಡಿವೆ.

ADVERTISEMENT

ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆ ಸೇರಿದಂತೆ ಕೇವಲ ಆರು ಕನ್ನಡದ ಕವಿತೆಗಳು ಆಯ್ಕೆಗೊಂಡಿವೆ.

ಅಂಕೋಲೆಯ ರೇಣುಕಾ ರಮಾನಂದರು ‘ಮೀನುಪೇಟೆಯ ತಿರುವು’ ಕವನ ಸಂಕಲನ ಮೂಲಕ ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದು, ಅವರ ಈ ಪುಸ್ತಕಕ್ಕೆ ರಾಜ್ಯಮಟ್ಟದ ಹತ್ತಾರು ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.