ಭಟ್ಕಳ: ಚುನಾವಣೆಯ ಬಿಸಿ ಒಂದೆಡೆ ನಿಧಾನವಾಗಿ ಕಡಿಮೆ ಆಗುತ್ತಿದ್ದರೆ, ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿದೆ. ತಾಲ್ಲೂಕಿನಾದ್ಯಂತ ಇರುವ ತೋಟ ಪಟ್ಟಿಗಳಲ್ಲಿ ತಿಂಗಳಿನಿಂದ ನೀರು ಕಾಣದೇ ಮರಗಳು ಸಸಿಗಳು ಒಣಗಿ ಹೋಗುತ್ತಿವೆ.
ತಿಂಗಳ ಹಿಂದೆ ಬಾವಿ ಕೆರೆಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರನ್ನು ತೋಟಗಳಿಗೆ ಹಾಯಿಸಲಾಗುತ್ತಿತ್ತು. ಕೆಲವೇದಿನಗಳಲ್ಲಿ ಒರತೆ ಕಡಿಮೆಯಾದ್ದರಿಂದ ಇರುವ ನೀರು ಮನೆ ಬಳಕೆಗಷ್ಟೇ ಸಾಕಾಗುತ್ತಿತ್ತು. ಹೀಗಾಗಿ ತೋಟಗಳಿಗೆ ನೀರು ಹಾಯಿಸದೇ ತಿಂಗಳ ಮೇಲಾಗಿದೆ. ಈಗ ಬಾವಿ, ಕೆರೆ, ನದಿಗಳೆಲ್ಲಾ ಬತ್ತಿ ಹೋಗಿವೆ. ಆದ್ದರಿಂದ ದೊಡ್ಡ ದೊಡ್ಡ ಬಾವಿ, ಕೆರೆಗಳನ್ನು ಹೊಂದಿರುವ ಕೃಷಿಕರೂ ಈಗ ದಿನಬಳಕೆಗೆ ಟ್ಯಾಂಕರ್ ನೀರಿನ ಮೊರೆ ಹೋಗುವಂತಾಗಿದೆ.
‘ಕೆಲವರು ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ತೆಂಗು, ಅಡಿಕೆ, ಎಲೆಬಳ್ಳಿ, ಕಾಳುಮೆಣಸು ಬಳ್ಳಿಗಳಿಗೆ ಸಾಕಷ್ಟು ನೀರಿನ ಅಗತ್ಯವಿದೆ. ಸರಿಯಾಗಿ ನೀರು ಹಾಯಿಸಿದರೆ ಮಾತ್ರ ಒಳ್ಳೆಯ ಬೆಳೆ ಕೊಡುತ್ತದೆ. ಈಗ ನಮಗೇ ನೀರು ಇಲ್ಲದಿರುವಾಗಿ ತೋಟಗಳಿಗೆ ನೀರು ಹಾಯಿಸುವುದಾರೂ ಎಲ್ಲಿಂದ’ ಎಂದು ತಾಲ್ಲೂಕಿನ ಜಾಲಿಯ ಕೃಷಿಕರಾದ ರಾಮಕೃಷ್ಣ ಭಟ್ ಅವರು ಪ್ರಶ್ನಿಸುತ್ತಾರೆ.
ತೆಂಗು, ಅಡಿಕೆ ಮರಗಳು, ಸಸಿಗಳು ನೀರಿಲ್ಲದೇ ಒಂದು ತಿಂಗಳವರೆಗೆ ಹೇಗಾದರೂ ಇರುತ್ತವೆ. ಅದಕ್ಕೂ ಮೀರಿ ಬಿಸಿಲಿನ ಝಳ ಹೆಚ್ಚಾದರೆ, ಮರಗಳು ಸುಟ್ಟುಹೋಗುವ ಅಪಾಯವೂ ಇದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ, ಈಗಾಗಲೇ ತೋಟಗಳಲ್ಲಿ ಒಣಗಿ ನಿಂತಿರುವ ತೆಂಗು, ಅಡಿಕೆ ಮರಗಳು ಇದ್ದಲ್ಲೇ ಸಾಯುತ್ತವೆ. ಮುಂದೆ ಈ ಮರಗಳಿಂದ ಬೆಳೆ ನಿರೀಕ್ಷೆ ಮಾಡುವ ಹಾಗಿಲ್ಲ ಎಂದು ಕೃಷಿಕರಾದ ಮಾರುಕೇರಿ ಕೋಟಖಂಡದ ಕೃಷ್ಣಮೂರ್ತಿ ಹೆಗಡೆ ಬೇಸರದಿಂದ ಹೇಳಿದರು.
ಬಿರು ಬೇಸಿಗೆಯ ತಿಂಗಳಾದ ಏಪ್ರಿಲ್, ಮೇ 15ರವರೆಗೆ ಕೆರೆ, ಬಾವಿಗಳಲ್ಲಿ ಸಣ್ಣದಾಗಿಯಾದರೂ ನೀರಿನ ಒರತೆ ಇರುತ್ತಿತ್ತು. ಆದರೆ, ಈ ವರ್ಷ ಮಾರ್ಚ್ ತಿಂಗಳ ಆರಂಭದಲ್ಲೇ ನೀರು ಬತ್ತುತ್ತಾ ಬಂದಿದೆ. ತಾಲ್ಲೂಕಿನಲ್ಲಿ ಶನಿವಾರ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಅಲ್ಲದೇ ಶುಕ್ರವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಮಿಂಚಿನೊಂದಿಗೆ ಕೆಲವು ಸಮಯ ತುಂತುರು ಮಳೆಯಾಗಿದ್ದರಿಂದ ಶನಿವಾರ ಧಗೆ ಮತ್ತಷ್ಟು ಹೆಚ್ಚಾಗಿದೆ. ಒಂದು ವಾರದಿಂದ ಪ್ರತಿದಿನ ಸಂಜೆ, ರಾತ್ರಿ ಮೋಡ ಕಾಣಸಿಕೊಳ್ಳುತ್ತಿದೆ. ಆದರೆ, ಮಳೆ ಬರುತ್ತಿಲ್ಲ. ಮಳೆಗಾಗಿ ದಿನ ಎಲ್ಲರಿಗೂ ಆಕಾಶದತ್ತ ನೋಡುವುದೇ ಕೆಲಸವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.