ಕಾರವಾರ: ತಾಲ್ಲೂಕಿನ ವಿಠ್ಠಲ, ವಿಷ್ಣು ದೇವಾಲಯಗಳಲ್ಲಿ ಭಾನುವಾರ ಅದ್ದೂರಿಯಾಗಿ ಆಷಾಢ ಏಕಾದಶಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಅಖಂಡ ಭಜನೆ, ವಿಠ್ಠಲ ನಾಮಸ್ಮರಣೆ, ಪೂಜೆಗಳು ನಡೆದವು.
ಇಲ್ಲಿನ ಮಾಲಾದೇವಿ ಮೈದಾನದ ಸಮೀಪದಲ್ಲಿರುವ ವಿಠ್ಠಲ ರುಖುಮಾಯಿ ದೇವಸ್ಥಾನ, ರಾಧಾಕೃಷ್ಣ ದೇವಸ್ಥಾನ, ಸಿದ್ದರದ ನರಸಿಂಹ ದೇವಸ್ಥಾನ, ಅಸ್ನೋಟಿ ಸಮೀಪದ ಕೃಷ್ಣಾಪುರದಲ್ಲಿರುವ ವಿಠ್ಠಲ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಆಷಾಢ ಏಕಾದಶಿ ಅಂಗವಾಗಿ ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ ಸೈಕ್ಲಿಂಗ್ ಮೂಲಕ ಮೆರವಣಿಗೆ ನಡೆಸಿದ ಸದಸ್ಯರು ವಿಠ್ಠಲನ ಭಜನೆ ಹಾಡುತ್ತ, ಅಲ್ಲಲ್ಲಿ ನರ್ತಿಸುತ್ತ ಸಾಗಿದರು. ಇಲ್ಲಿನ ವಿಠ್ಠಲ ರುಖುಮಾಯಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭಗೊಂಡ ಸೈಕ್ಲಿಂಗ್ ಅಸ್ನೋಟಿಯ ಕೃಷ್ಣಾಪುರದವರೆಗೂ ಸಾಗಿತು.
ಸಿದ್ದರದ ನರಸಿಂಹ ದೇವಾಲಯದಲ್ಲಿ ನಸುಕಿನ ಜಾವದಿಂದ ಆರಂಭಗೊಂಡು ಸೋಮವಾರ ನಸುಕಿನ ಜಾವದವರೆಗೂ ನಿರಂತರ ಭಜನೆ ನಡೆದವು. ತಡರಾತ್ರಿವರೆಗೂ ವಿಠ್ಠಲ ದೇವಾಲಯಗಳಲ್ಲಿ ಪೂಜೆ ನಡೆದವು. ಏಕಾದಶಿ ಅಂಗವಾಗಿ ಉಪವಾಸ ವ್ರತ ಕೈಗೊಂಡಿದ್ದ ಭಕ್ತರು ಹರಕೆಗಳನ್ನು ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.