ಶಿರಸಿ: ಹಿಂದಿನ ಸರ್ಕಾರ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣಗಳ ಮಾಹಿತಿಯನ್ನು ಇಡೀ ರಾಜ್ಯದೆಲ್ಲೆಡೆ ಸಂಗ್ರಹಿಸಲಾಗುತ್ತಿದೆ. ಅವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಬಿಜೆಪಿ ಸರ್ಕಾರ ಹಿಂಪಡೆಯಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಶಾಂತಿ ಇರುವುದು ಕುಮಾರಸ್ವಾಮಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಪೊಲೀಸರ ಮೇಲೆ ಸಹ ಅವರು ಆಪಾದನೆ ಮಾಡುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದ ಸಂಬಂಧ ಹೇಳಿಕೆ ನೀಡಿರುವ ಕುಮಾರಸ್ವಾಮಿ, ಪೊಲೀಸರೇ ಇದನ್ನು ಸೃಷ್ಟಿಸಿದ್ದಾರೆ ಎನ್ನುವ ಮೂಲಕ ನೀಚತನಕ್ಕೆ ಇಳಿದಿದ್ದಾರೆ’ ಎಂದರು.
ಮಂಗಳೂರು ಗಲಭೆಯಲ್ಲಿ ಗೂಂಡಾಗಳು ರಿಕ್ಷಾದಲ್ಲಿ ಕಲ್ಲು ಹೊತ್ತು ತಂದಿರುವ, ಅಂತಹ ಸಂದರ್ಭದಲ್ಲಿ ಪೊಲೀಸರು ಜೀವಭಯ ಬಿಟ್ಟು ಶಾಂತಿ ತರಲು ಪ್ರಯತ್ನಿಸಿರುವ ಎಲ್ಲ ಸಂಗತಿಗಳು ಮಾಧ್ಯಮದಲ್ಲಿ ಬಿತ್ತರಗೊಂಡಿವೆ. ಇಂತಹ ಪೊಲೀಸರ ಮೇಲೆ ಆರೋಪ ಮಾಡುತ್ತಿರುವ ಕುಮಾರಸ್ವಾಮಿಗೆ, ರಾಜ್ಯದಲ್ಲಿ ಶಾಂತಿ ಇರುವುದು ಸಮಾಧಾನವಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.