ಕಾರವಾರ: ‘ರಾಜ್ಯ ಹಿಂದುಳಿದ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಲೋಪವಿಲ್ಲದಂತೆ ನಡೆಸಬೇಕು. ಗಣತಿದಾರರಿಗೆ ಸೂಕ್ತ ತರಬೇತಿ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸೆ.22 ರಿಂದ ಅ.27ರ ವರೆಗೆ ನಡೆಯಲಿರುವ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ಮನೆಗಳು ಬಿಟ್ಟುಹೋಗದಂತೆ ಎಚ್ಚರವಹಿಸಬೇಕಾಗಿದೆ. ಈಗಾಗಲೆ ಹೆಸ್ಕಾಂನಿಂದ ಪ್ರತಿ ಮನೆಗಳ ಬಾಗಿಲಿಗೆ ಸ್ಟಿಕ್ಕರ್ ಅಂಟಿಸುವ ಕೆಲಸ ನಡೆದಿದೆ. ಸಮೀಕ್ಷೆಗೆ ರೂಪಿಸಲಾದ ಆ್ಯಪ್ ಬಗ್ಗೆ ಸರಿಯಾಗಿ ಅರಿತುಕೊಂಡು ಗಣತಿದಾರರಿಗೆ ಮಾಹಿತಿ ನೀಡಿ’ ಎಂದರು.
‘ಪ್ರತಿ 150 ಮನೆಗಳಿಗೆ ಒಬ್ಬರು ಗಣತಿದಾರರು ಸಮೀಕ್ಷೆ ನಡೆಸಬೇಕು. ಪ್ರತಿ 50 ಗಣಿತಿದಾರರಿಗೆ ತಲಾ ಒಂದು ಗುಂಪು ರಚಿಸಿ, ಅವರು ನಡೆಸುವ ಸಮೀಕ್ಷೆಯ ಮಾಹಿತಿ ಪಡೆಯುತ್ತಿರಬೇಕು. ಸಮೀಕ್ಷೆ ವೇಳೆ ಆಯೋಗ ನೀಡಿದ 60 ಪ್ರಶ್ನಾವಳಿಗಳಿಗೆ ಜನರಿಂದ ಸೂಕ್ತ ಮಾಹಿತಿ ಪಡೆಯಬೇಕು. ಇವೆಲ್ಲ ಅಂಶಗಳನ್ನು ತರಬೇತಿ ವೇಳೆ ಗಣತಿದಾರರಿಗೆ ತಿಳಿಸುವ ಕೆಲಸ ಟ್ರೇನರ್ಗಳಿಂದ ನಡೆಯಬೇಕು’ ಎಂದರು.
‘ಇಂಟರನೆಟ್ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿ ಜನರನ್ನು ಹತ್ತಿರದ ನೆಟ್ವರ್ಕ್ ಇರುವಂತಹ ಸರ್ಕಾರಿ ಕಟ್ಟಡಕ್ಕೆ ಕರೆತಂದು ಸಮೀಕ್ಷೆ ನಡೆಸಬೇಕು. ಚಿಕ್ಕ ಮಕ್ಕಳು ಮತ್ತು ಅಕ್ಕ ಪಕ್ಕದ ಮನೆಯವರಿಂದ ಮಾಹಿತಿಯನ್ನು ಪಡೆದು ಭರ್ತಿ ಮಾಡುವ ಕೆಲಸ ನಡೆಯಬಾರದು’ ಎಂದರು.
ಹಿಂದುದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.