ಯಲ್ಲಾಪುರ: ತಾಲ್ಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆ ಊರಿನಲ್ಲಿರುವ ಅಂಗನವಾಡಿಯಲ್ಲಿ ಮಕ್ಕಳು ಪ್ಲಾಸ್ಟಿಕ್ ಹೊದಿಕೆಯ ಚಪ್ಪರದಲ್ಲಿಯೇ ಕಲಿಕೆ ಮುಂದುವರಿಸಬೇಕಾದ ಅನಿವಾಯ೯ತೆ ಎದುರಾಗಿದೆ.
ಮೂರು ವರ್ಷದ ಹಿಂದೆಯೇ ಕಟ್ಟಡ ಮಂಜೂರಾದರೂ ಇದುವರೆಗೂ ಕಟ್ಟಡ ಕಾಮಗಾರಿ ಪೂಣ೯ಗೊಳ್ಳದೇ ಮಕ್ಕಳು ತೊಂದರೆ ಅನುಭವಿಸುಂತಾಗಿದೆ.
ʻಕಟ್ಟಡ ಕಾಮಗಾರಿ ಕಳೆದ ವರ್ಷ ಮಳೆಗಾಲದಲ್ಲಿ ಪ್ರಾರಂಭವಾಗಿದ್ದರೂ ಇದುವರೆಗೂ ಮುಕ್ತಾಯಗೊಂಡಿಲ್ಲ. ಈ ವರ್ಷ ಮಳೆಗಾಲ ಪ್ರಾರಂಭವಾಗುವ ಹೊತ್ತಿಗೆ ಮಕ್ಕಳು ಹೊಸ ಕಟ್ಟಡದಲ್ಲಿ ಓದುತ್ತಾರೆ ಎಂಬ ಹೆತ್ತವರ ಕನಸು ನನಸಾಗಲೇ ಇಲ್ಲ. ಮಳೆಗಾಲದ ಹೊತ್ತಿಗೆ ಒಂದು ಕೋಣೆಯನ್ನಾದರೂ ರೆಡಿ ಮಾಡಿ ಕೊಡುತ್ತೇನೆಂದು ಗುತ್ತಿಗೆದಾರರು ಹೇಳುತ್ತಲೇ ಬಂದರಾದರೂ ಕೆಲಸ ಮುಗಿದಿಲ್ಲʼ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಗ.ರಾ. ಭಟ್ಟ ಬಾಳೇಗದ್ದೆ ತಿಳಿಸಿದ್ದಾರೆ.
ಈಗ ಮಳೆಗಾಲ ಪ್ರಾರಂಭವಾಗಿದೆ. ಮಕ್ಕಳ ಕಲಿಕೆಗೆ ಸರಿಯಾದ ಜಾಗವಿಲ್ಲ. ಎರಡು ವರ್ಷಗಳ ಹಿಂದೆ ಪಂಚಾಯಿತಿ ವತಿಯಿಂದ ಮುಚ್ಚಿಗೆಗೆ ತಗಡು ಕೊಟ್ಟು, ಊರಿನವರು ಶ್ರಮದಾನದ ಮೂಲಕ ಕಟ್ಟಿದ ಚಪ್ಪರ ಮುರಿದು ಬೀಳುವ ಹಂತದಲ್ಲಿದೆ. ಮಕ್ಕಳಿಗೆ ಬೇರೆ ವ್ಯವಸ್ಥೆ ಮಾಡೋಣವೆಂದರೆ ಊರಿನಲ್ಲಿ ಬೇರಾವುದೇ ಸರ್ಕಾರಿ ಕಟ್ಟಡ ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಕಟ್ಟಡದ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿತ್ತು ಎಂದವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.