ಶಿರಸಿ: ಭಾರತ ವಿಶ್ವಗುರುವಾಗಬೇಕು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನಂತಕುಮಾರ ಹೆಗಡೆ ಮತ್ತೆ ಗೆಲುವಿನ ನಗೆ ಬೀರಬೇಕು ಎಂಬ ಪ್ರಾರ್ಥಿಸಿ, ಬಿಜೆಪಿ ಸದಸ್ಯರು ಮಂಗಳವಾರ ಇಲ್ಲಿ ‘ಅಭಯಂಕರ ದಿಗ್ವಿಜಯ’ ಹೋಮ ನಡೆಸಿದರು.
ಯುವ ಮೋರ್ಚಾ ಹಾಗೂ ನಗರ ಮಂಡಳದ ಆಶ್ರಯದಲ್ಲಿ ನಡೆದ ಹೋಮದ ಪೂರ್ಣಾಹುತಿಯ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭಾಗವಹಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಈಗಾಗಲೇ ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರ ಹಿಡಿಯುವುದು ಶತಸಿದ್ಧ ಎಂದಿವೆ. ಇಷ್ಟಾದರೂ ಇಲಿಯಂತಹ ಮಹಾಘಟಬಂಧನ್ ಅನ್ನು ಹುಲಿಯಂತೆ ಬಿಂಬಿಸುತ್ತಿರುವ ಮಾಧ್ಯಮಗಳು ಇನ್ನಾದರೂ ವಸ್ತುನಿಷ್ಠ ವರದಿ ಮಾಡಿ ಗೌರವ ಉಳಿಸಿಕೊಳ್ಳಬೇಕು’ ಎಂದರು.
ವಿ.ವಿ ಪ್ಯಾಟ್ ಎಣಿಕೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ. ಅದರಿಂದ ಸೋಲು-ಗೆಲುವಿನ ಮೇಲೆ ಪರಿಣಾಮವಾಗುವುದಿಲ್ಲ. ಮತ ಎಣಿಕೆ ಪಾರದರ್ಶಕವಾಗಿ ನಡೆಯುತ್ತದೆ ಎಂದು ಹೇಳಿದರು. ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ ಮರಾಠೆ, ಪ್ರಮುಖರಾದ ನಂದನ ಸಾಗರ, ರಾಜೇಶ ಶೆಟ್ಟಿ, ಸುದರ್ಶನ ವೈದ್ಯ, ವೀಣಾ ಭಟ್ಟ, ರವಿ ಚಂದಾವರ, ರಿತೇಶ ಕೆ, ಕೃಷ್ಣ ಎಸಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.