ಭಟ್ಕಳ: ‘ಮನೋನಿಗ್ರಹ, ಆತ್ಮರಕ್ಷಣೆಗೆ ಮಾರ್ಷಲ್ ಆರ್ಟ್ ಸಹಕಾರಿಯಾಗಿದೆ’ ಎಂದು ಬೀನಾ ವೈದ್ಯ ಎಜುಕೇಷನಲ್ ಟ್ರಸ್ಟ್ನ ಆಡಳಿತ ವ್ಯವಸ್ಥಾಪಕಿ ಪುಷ್ಪಲತಾ ವೈದ್ಯ ಹೇಳಿದರು.
ಪಟ್ಟಣದ ಕುದುರೆ ಬೀರಪ್ಪ ಸಭಾಭವನದಲ್ಲಿ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ವತಿಯಿಂದ ಈಚೆಗೆ ನಡೆದ 12ನೇ ಬ್ಲಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಆಧುನಿಕತೆಯ ಭರಾಟೆಯಲ್ಲಿ ಪೋಷಕರು ಮಕ್ಕಳಿಗೆ ಸಾಕಷ್ಟು ಸಮಯ ನೀಡಲಾಗುತ್ತಿಲ್ಲ. ಆದರೂ ಕೆಲವು ಪಾಲಕರು, ಕರಾಟೆಯಂತಹ ಸಮರ ಕಲೆಯನ್ನು ಮಕ್ಕಳು ಕಲಿಯಲು ಉತ್ತೇಜನ ನೀಡುತ್ತಿದ್ದಾರೆ. ಕರಾಟೆ ಆತ್ಮರಕ್ಷಣೆಯೊಂದಿಗೆ ಏಕಾಗ್ರತೆ ಕಲಿಸುತ್ತಿದೆ’ ಎಂದರು.
ಪತ್ರಕರ್ತ ರಾಮಚಂದ್ರ ಕಿಣಿ ಮಾತನಾಡಿ, ‘ಕರಾಟೆ ಜತೆಗೆ ನೂರಾರು ವಿದ್ಯಾರ್ಥಿಗಳಿಗೆ ಈಜು ತರಬೇತಿಯನ್ನೂ ನೀಡುತ್ತಿರುವ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ಕಾರ್ಯ ಅಭಿನಂದನೀಯ’ ಎಂದು ಹೇಳಿದರು.
ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಮಾತನಾಡಿ, ‘ಮಕ್ಕಳಿಗೆ ಮಾನವೀಯ ಮೌಲ್ಯಗಳ ಅರಿವು ಮೂಡಿಸಬೇಕು. ಮಕ್ಕಳ ಎದುರು ಪಾಲಕರು ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಬೇಕು. ವಾರದಲ್ಲಿ ಒಂದು ದಿನವಾದರೂ ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಬೇಕು. ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಈ ಮೂಲಕ ಕೊಡುಗೆ ನೀಡಬೇಕು’ ಎಂದರು.
ವಿದ್ವಯಾಭಾರತಿ ಶಾಲೆಯ ಮುಖ್ಯಶಿಕ್ಷಕಿ ರೂಪಾ ರಮೇಶ ಖಾರ್ವಿ, ಕಮಲಾ ನಾಯಕ, ವಕೀಲ ರಾಜೇಶ ನಾಯ್ಕ ಮಾತನಾಡಿದರು. 22 ವಿದ್ಯಾರ್ಥಿಗಳಿಗೆ ಕರಾಟೆ ಬ್ಲಾಕ್ ಬೆಲ್ಟ್ ನೀಡಲಾಯಿತು.
ಕುದುರೆ ಬೀರಪ್ಪ ದೇವಸ್ಥಾನದ ಭೂದಾನ ಸಮಿತಿ ಅಧ್ಯಕ್ಷ ವೆಂಕಟೇಶ ನಾಯ್ಕ, ಹನ್ಸಿ ಸಿ. ರಾಜನ್, ಕರಾಟೆ ಶಿಕ್ಷಕರಾದ ಸುರೇಶ ಮೊಗೇರ, ನಾಗರಾಜ ದೇವಾಡಿಗ, ಆರ್ಯನ್ ವಾಸು ನಾಯ್ಕ, ರಾಜಶೇಖರ ಗೌಡ, ಮಂಜುನಾಥ ದೇವಾಡಿಗ, ಪ್ರವೀಣ ಹರಿಜನ, ವಿನೋದ ಗೊಂಡ, ಗೋಪಾಲ ನಾಯ್ಕ, ಅಂಜಲಿ ಕಾಮತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.