ಕುಮಟಾ: ಪಟ್ಟಣದ ವಿದ್ಯಾಧಿರಾಜ ಡಿಪ್ಲೊಮಾ ಕಾಲೇಜು ಸಮೀಪದ ನಿರ್ಜನ ಪ್ರದೇಶ ಗುಡ್ಡದಲ್ಲಿ ಬುಧವಾರ ಸಂಜೆ ಪತ್ತೆಯಾದ ಬಾಂಬ್ ಮಾದರಿಯ ವಸ್ತು, ನಕಲಿ ಎಂದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಈ ಮೂಲಕ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಪರಿಶೀಲನೆಯ ನೇತೃತ್ವ ವಹಿಸಿದ್ದರು. ಕುಮಟಾ ಪೊಲೀಸ್ ಠಾಣೆಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸುಧಾರಿತ ಸ್ಫೋಟಕ ಮಾದರಿಯ, ಅನುಮಾನಾಸ್ಪದ ವಸ್ತು ಕಂಡುಬಂದ ಕಾರಣ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.
‘ಶ್ವಾನ ದಳ ಹಾಗೂ ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಬಂದು, ಅನುಮಾನಾಸ್ಪದ ವಸ್ತು ಸಿಕ್ಕಿದ ಪ್ರದೇಶ, ಸಮೀಪದ ರೈಲ್ವೆ ನಿಲ್ದಾಣದಲ್ಲಿ ಶೋಧನಾ ಕಾರ್ಯ ಕೈಗೊಂಡಿತು. ಆದರೆ, ಅದರಲ್ಲಿ ಯಾವುದೇ ಸ್ಫೋಟಕ ಸಾಮಗ್ರಿ ಕಂಡು ಬಂದಿಲ್ಲ’ ಎಂದು ತಿಳಿಸಿದರು.
ಬಾಂಬ್ ಮಾದರಿಯ ವಸ್ತುವಿಗೆ ಪಿ.ವಿ.ಸಿ ಪೈಪ್, ವಿದ್ಯುತ್ ಕೇಬಲ್ ಮತ್ತು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದನ್ನು ಯಾವ ಉದ್ದೇಶಕ್ಕಾಗಿ ತಯಾರಿಸಲಾಗಿದೆ, ಆರೋಪಿಗಳು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.