ಕಾರವಾರ:ಐದು ತಿಂಗಳಿನಿಂದ ಬಾಕಿಯಿರುವ ವೇತನವನ್ನು ಕೂಡಲೇ ಪಾವತಿಸಬೇಕು ಎಂದುಆಗ್ರಹಿಸಿ ಬಿಎಸ್ಎನ್ಎಲ್ ಗುತ್ತಿಗೆ ನೌಕರರು ಉಪ ಪ್ರಧಾನ ವ್ಯವಸ್ಥಾಪಕರ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಜತೆಗೂಡಿದ ನೌಕರರು, ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿ ಸಂಘಟನೆಯ ಪ್ರಮುಖರು, ‘ಗುತ್ತಿಗೆ ನೌಕರರ ಬಾಕಿ ವೇತನವನ್ನು ನೀಡುವುದರ ಜತೆಗೆ ಹಂತಹಂತವಾಗಿ ನೌಕರಿಯನ್ನು ಕಾಯಂ ಮಾಡಬೇಕು. ನಿಯಮದ ಪ್ರಕಾರ ನೀಡಬೇಕಿರುವ ಎಲ್ಲ ಸವಲತ್ತುಗಳನ್ನೂ ನೀಡಬೇಕು. ಸಂಸ್ಥೆಯನ್ನು ಖಾಸಗೀಕರಣ ಮಾಡದೇ ಮತ್ತಷ್ಟು ಬೆಳೆಸಬೇಕು’ ಎಂದು ಒತ್ತಾಯಿಸಿದರು.
ಬಿಎಸ್ಎನ್ಎಲ್ ಮೊಬೈಲ್ ಟವರ್ಗಳಲ್ಲಿ 4ಜಿ ಸ್ಪೆಕ್ಟ್ರಂ ಸಂಪರ್ಕ ಕೊಡಬೇಕು. ಈ ಮೂಲಕ ಖಾಸಗಿ ಮೊಬೈಲ್ ಆಪರೇಟರ್ಗಳ ಸ್ಪರ್ಧೆಯನ್ನು ಮೆಟ್ಟಿ ನಿಲ್ಲಬೇಕು ಎಂದೂ ಆಗ್ರಹಿಸಲಾಯಿತು.
ಕಾರವಾರ, ಭಟ್ಕಳ, ಮುಂಡಗೋಡ, ಜೊಯಿಡಾ, ಅಂಕೋಲಾ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗುತ್ತಿಗೆ ನೌಕರರುಧರಣಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವ್ಕರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಾನುಭಾಗ, ಗುತ್ತಿಗೆ ನೌಕರರ ಸಂಘದ ಪದಾಧಿಕಾರಿ ಆರ್.ಎನ್.ನಾಯಕ್, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.