ಶಿರಸಿ: ಸಾಂಸ್ಥಿಕ ಕ್ವಾರಂಟೈನ್ ಕೇಂದ್ರವಾಗಿರುವ ತಾಲ್ಲೂಕಿನ ಕಲ್ಲಿ ಮೊರಾರ್ಜಿ ಶಾಲೆಯ ಪ್ರಾಚಾರ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಾವು ಬಿಎಸ್ಪಿ ನಾಯಕರು. ವಸತಿ ಶಾಲೆಯಲ್ಲಿ ಉಳಿಯಲು ಸಾಧ್ಯವಿಲ್ಲ. ನಮ್ಮನ್ನು ಮನೆಗೆ ಕಳುಹಿಸಿ’ ಎಂದು ಕ್ವಾರಂಟೈನ್ನಲ್ಲಿದ್ದ ಸುಧಾಕರ ಜೋಗಳೇಕರ, ನಾಗಸೇನ ಜೋಗಳೇಕರ ಎಂಬುವವರು ಗಲಾಟೆ ಮಾಡಿದ್ದರು. ಅಲ್ಲದೇ, ಪ್ರಾಚಾರ್ಯರ ಮೇಲೆ ದರ್ಪ ತೋರಿದ್ದರು ಮತ್ತು ಗಂಟಲು ದ್ರವ ಸಂಗ್ರಹಿಸಲು ಬಂದಿದ್ದ ವೈದ್ಯರ ಜೊತೆ ಅಸಹಕಾರ ತೋರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಿರತೆ ಸಂಚಾರ: ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಶಿರಸಿ: ಇಲ್ಲಿನ ಆದರ್ಶನಗರದ ಸಮೀಪ ಶುಕ್ರವಾರ ರಾತ್ರಿ ಚಿರತೆಯೊಂದು ಓಡಾಡಿದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖ್ಯ ರಸ್ತೆಯವರೆಗೆ ಬಂದಿದ್ದ ಚಿರತೆ, ವಾಪಸ್ ತಿರುಗಿ ಕಾಡಿನೊಳಗೆ ಹೋಗಿದೆ. ಈ ದೃಶ್ಯವು ಎಚ್.ಪಿ ಗ್ಯಾಸ್ ಅಂಗಡಿ ಎದುರು ಹಾಕಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೊ ತುಣುಕು ವಾಟ್ಸ್ಆ್ಯಪ್ಗಳಲ್ಲಿ ಹರಿದಾಡಿತು. ಇದನ್ನು ಕಂಡ ಆ ಭಾಗದ ಜನರಲ್ಲಿ ಭಯ ಆವರಿಸಿದೆ. ಚಿರತೆ ಕಾಣಿಸಿಕೊಂಡ ಬೆನ್ನಿಗೆ ಸಾರ್ವಜನಿಕರ ಒತ್ತಾಯದ ಮೇರೆಗೆ ಶನಿವಾರದಿಂದ ಈ ಪ್ರದೇಶದಲ್ಲಿ ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಡಿಎಫ್ಒ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.