ADVERTISEMENT

ರಾಜ್ಯ ಬಯಸಿದರೆ ತಾಲ್ಲೂಕು ಮಟ್ಟದಲ್ಲಿ ಆಯುಷ್ ಆಸ್ಪತ್ರೆಗೆ ಸಹಕಾರ: ನಾಯಕ್

ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 18:51 IST
Last Updated 11 ಜನವರಿ 2021, 18:51 IST
ಖಾಸಗಿ ಕಾರ್ಯದ ನಿಮಿತ್ತ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಸೋಮವಾರ ಯಲ್ಲಾಪುರಕ್ಕೆ ಭೇಟಿ ನೀಡಿದ್ದರು
ಖಾಸಗಿ ಕಾರ್ಯದ ನಿಮಿತ್ತ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಸೋಮವಾರ ಯಲ್ಲಾಪುರಕ್ಕೆ ಭೇಟಿ ನೀಡಿದ್ದರು   

ಯಲ್ಲಾಪುರ(ಉತ್ತರ ಕನ್ನಡ): ‘ಪ್ರತಿ ತಾಲ್ಲೂಕು ಮಟ್ಟದಲ್ಲಿ ರಾಜ್ಯ ಸರ್ಕಾರ ಆಯುಷ್ ಆಸ್ಪತ್ರೆ ನಿರ್ಮಿಸಲು ಮುಂದಾದರೆ ಕೇಂದ್ರ ಸರ್ಕಾರ
ಹಾಗೂ ಆಯುಷ್ ಇಲಾಖೆ ಸಹಕಾರ ನೀಡಲಿದೆ’ ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಹೇಳಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಸೋಮವಾರ ಪಟ್ಟಣಕ್ಕೆ ಬಂದಿದ್ದ ಅವರು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು.

‘ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಯುಷ್ ಪದ್ಧತಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ದೇಶದಲ್ಲಿ ನಿರ್ಮಿಸಲಾಗುತ್ತಿರುವ 1.25 ಲಕ್ಷ ಹೆಲ್ತ್ ವೆಲ್‌ನೆಸ್ ಸೆಂಟರ್‌ಗಳ ಪೈಕಿ 12,500 ಸೆಂಟರ್‌ಗಳನ್ನು ಆಯುಷ್ ಇಲಾಖೆಗೆ ನೀಡಿದೆ. ಜಿಲ್ಲಾ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಒತ್ತಡ ಕಡಿಮೆಯಾಗಲಿ ಎಂಬುದು ಇದರ ಉದ್ದೇಶ’ ಎಂದರು.

‘ಪ್ರತಿ ಜಿಲ್ಲೆಗೊಂದರಂತೆ ದೇಶದಲ್ಲಿ ಈವರೆಗೆ 150 ಜಿಲ್ಲಾ ಆಯುಷ್‌ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಪ್ರತಿ ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಬಯಸಿದಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಆಯುಷ್ ಆಸ್ಪತ್ರೆ ನಿರ್ಮಿಸಲು ಮುಂದಾದರೆ 60:40 ಅನುಪಾತದಲ್ಲಿ ಸಹಕಾರ ನೀಡಲಿದೆ’ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸೂಚಿಸಿದ ಮಾರ್ಗಸೂಚಿ ಹಾಗೂ ಆಯುರ್ವೇದ ಔಷಧಿಗಳನ್ನು ಜನರು ಸೇವಿಸಿದ್ದರ ಪರಿಣಾಮ ಮತ್ತು ಜನರ ರೋಗ ನಿರೋಧಕ ಶಕ್ತಿ, ಹಾಗೂ ಆಹಾರ ಪದ್ಧತಿಯ ಕಾರಣದಿಂದಾಗಿ ವಿದೇಶದಷ್ಟು ವ್ಯಾಪಕ ಪರಿಣಾಮ ಬೀರಲಿಲ್ಲ. ಆದಾಗ್ಯೂ ಜನರು ಕೋವಿಡ್‌ ಮಾರ್ಗ ಸೂಚಿಗಳನ್ನು ಪಾಲಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.