ಶಿರಸಿ: ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಪ್ರಗತಿಯಲ್ಲಿರುವ ಸಮಯದಲ್ಲಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರನ್ನು ಹಾವೇರಿ ಜಿಲ್ಲೆಗೆ ನೇಮಿಸಿದ್ದು ಸಮಂಜಸವಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಹಾಗೂ ಕೃಷಿ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಹೆಗಡೆ ಕಡೆಕೋಡಿ ಹೇಳಿದ್ದಾರೆ.
‘ಜಿಲ್ಲೆಯ ಸಚಿವರೇ ಉಸ್ತುವಾರಿ ವಹಿಸಿಕೊಂಡರೆ ಆಡಳಿತ ವ್ಯವಸ್ಥೆ ಚುರುಕಾಗಿರುತ್ತದೆ. ಜಿಲ್ಲೆಯ ಆಗು ಹೋಗುಗಳ ಬಗ್ಗೆ, ಜನತೆಯ ಅಪೇಕ್ಷೆಯ ಬಗ್ಗೆ ಅವರಿಗೆ ಸಂಪೂರ್ಣ ಅರಿವು ಇರುತ್ತದೆ. ಜನ ಸಾಮಾನ್ಯರಿಗೆ ಸ್ವಂದಿಸುತ್ತಾರೆ. ಸಮಗ್ರ ಅಭಿವೃದ್ಧಿ ಕುರಿತಾದ ಕಾಳಜಿ ಹಾಗೂ ನೀಲನಕ್ಷೆ ಹೊಂದಿರುತ್ತಾರೆ. ಶಿವರಾಮ ಹೆಬ್ಬಾರ ಅವರನ್ನೇ ಉಸ್ತುವಾರಿ ಸಚಿವರಾಗಿ ಮುಂದುವರಿಸಬೇಕು’ ಎಂದು ಅವರು ಅಭಿಪ್ರಾಯಿಸಿದ್ದಾರೆ.
‘ಬೇರೆ ಜಿಲ್ಲೆಯವರಿಗೆ ಉಸ್ತುವಾರಿ ವಹಿಸಿದ್ದಾಗ ಅಭಿವೃದ್ಧಿ ಚಟುವಟಿಕೆ ಹಿನ್ನೆಡೆ ಉಂಟಾಗಿರುವ ಕಹಿ ಅನುಭವ ಈಗಾಗಲೇ ಆಗಿದೆ. ಉಸ್ತುವಾರಿ ಸಚಿವರು ತಳಮಟ್ಟದ ಸಂಪರ್ಕ ಹೊಂದಿರಬೇಕು. ಜಿಲ್ಲೆಗೆ ಒಂದೆರಡು ಬಾರಿ ಭೇಟಿ ನೀಡಿದರೆ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಂವಹನ ನಡೆಸಿದರೆ ಅದು ಜಿಲ್ಲೆಯ ಉಸ್ತುವಾರಿ ಎನಿಸಿಕೊಳ್ಳುವದಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.