ADVERTISEMENT

ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು: ದೇವರ ಮೊರೆ ಹೋದ ಅಜ್ಜಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 15:24 IST
Last Updated 18 ಮೇ 2021, 15:24 IST
ಯಲ್ಲಾಪುರದಲ್ಲಿ ಮೊಮ್ಮಗನ ಮೃತ ದೇಹವನ್ನು ದೇವರ ಗುಡಿಯೆದುರು ಇಟ್ಟು ಬದುಕಿಸಿಕೊಡುವಂತೆ ಅಜ್ಜಿ ಮೊರೆಯಿಡುತ್ತಿರುವುದು
ಯಲ್ಲಾಪುರದಲ್ಲಿ ಮೊಮ್ಮಗನ ಮೃತ ದೇಹವನ್ನು ದೇವರ ಗುಡಿಯೆದುರು ಇಟ್ಟು ಬದುಕಿಸಿಕೊಡುವಂತೆ ಅಜ್ಜಿ ಮೊರೆಯಿಡುತ್ತಿರುವುದು   

ಯಲ್ಲಾಪುರ: ಪಟ್ಟಣದ ಗಣಪತಿ ಗಲ್ಲಿಯಲ್ಲಿ ಮಗುವೊಂದು ಮಂಗಳವಾರ, ಗಂಟಲಲ್ಲಿ ಶೇಂಗಾ ಬೀಜ ಸಿಲುಕಿಕೊಂಡು ಉಸಿರುಕಟ್ಟಿ ಮೃತಪಟ್ಟಿತು. ಇದರಿಂದ ದಿಕ್ಕೇ ತೋಚದ ಅಜ್ಜಿ, ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋದರು. ದೇವರ ಗುಡಿಯೆದುರು ಇಟ್ಟು ಬದುಕಿಸಿಕೊಡುವಂತೆ ಅಂಗಲಾಚಿದರು.

ರಾಮನಾಥ ಆಚಾರಿ ಎಂಬುವವರ ಎರಡೂವರೆ ವರ್ಷದ ಸಾತ್ವಿಕ್ (2.5) ಮೃತ ಮಗು. ಬಾಲಕ ಮನೆಯಲ್ಲಿ ಮಂಗಳವಾರ ಸಂಜೆ ಶೇಂಗಾ ಬೀಜಗಳನ್ನು ತಿಂದಿದ್ದ. ಅಚಾನಕ್ ಆಗಿ ಅದು ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತು. ಮನೆಯವರು ತಕ್ಷಣವೇ ಹಾಗೂ ಹೀಗೂ ಪ್ರಯತ್ನ ಮಾಡಿ ಗಂಟಲಿನಿಂದ ಎರಡು ಶೇಂಗಾ ಬೀಜಗಳನ್ನು ಹೊರ ತೆಗೆದರು. ಆದರೂ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದರು.

ಅಲ್ಲಿನ ವೈದ್ಯರು ಇನ್ನೂ ಒಂದು ಶೇಂಗಾ ಬೀಜವನ್ನು ಹೊರತೆಗೆದರು. ಆದರೆ, ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ADVERTISEMENT

ಅಜ್ಜಿ ಮೊಮ್ಮಗನ ಮೃತದೇಹವನ್ನು ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತೆಗೆದುಕೊಂಡು ಹೋದರು. ಗರ್ಭಗುಡಿಯೆದುರು ಮಲಗಿಸಿದ ಅಜ್ಜಿ, ದೇವಸ್ಥಾನದ ಘಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆ ಹೋದರು. ಈ ಸನ್ನಿವೇಶಗಳನ್ನು ಅಸಹಾಯಕರಾಗಿ ನೋಡುತ್ತಿದ್ದವರೂ ಭಾವುಕರಾಗಿ ಅವರ ಕಣ್ಣುಗಳಲ್ಲಿ ಹನಿಗೂಡಿದವು. ನಂತರ ಅಜ್ಜಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ಕರೆದುಕೊಂಡು ಹೋಗಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರು, ‘ಮಗುವನ್ನು ಕರೆದುಕೊಂಡು ಬಂದಾಗಲೇ ಸ್ಪಂದಿಸುತ್ತಿರಲಿಲ್ಲ. ಶೇಂಗಾ ಬೀಜವು ಶ್ವಾಸಕೋಶದ ನಾಳಕ್ಕೆ ಅಡ್ಡ ನಿಂತಿರುವ ಸಾಧ್ಯತೆಗಳಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.