ಶಿರಸಿ: ಸಂಸ್ಕಾರಯುತ ಮಕ್ಕಳೆ ಸಮಾಜಕ್ಕೆ ಭವಿಷ್ಯದ ಆಸ್ತಿ. ಹೀಗಾಗಿ ಅಂತಹ ಮಕ್ಕಳ ರೂಪಿಸುವ ಜವಾಬ್ದಾರಿಯನ್ನು ಪ್ರತಿ ತಾಯಂದಿರು ನಿಭಾಯಿಸಿ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಮಠದ ಸುಧರ್ಮ ಸಭಾಂಗಣದಲ್ಲಿ ಭಾನುವಾರ ನಡೆದ ಮಾತೆಯರ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿದ ಮಾತನಾಡಿದ ಅವರು, ‘ಸಂಪ್ರದಾಯ, ವಿನಯತೆ, ಪರಂಪರೆಯ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ತಿಳುವಳಿಕೆ ನೀಡುವತ್ತ ಗಮನ ನೀಡಬೇಕಾಗಿದೆ. ಈಗಿನ ಜೀವನ ಶೈಲಿಗೆ ಮೊರೆಹೋಗಿ ಯುವ ಪೀಳಿಗೆ ಸಂಪ್ರದಾಯ ಮರೆಯುತ್ತಿದ್ದು ಆತಂಕಕಾರಿ. ಹೀಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕು’ ಎಂದರು.
‘ಸಂಸ್ಕೃತಿಯ ಅರುವಿಲ್ಲದ ಪರಿಣಾಮ ಇಂದು ಸಾಂಸಾರಿಕ ಜೀವನದಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ. ವಿವಾಹ ವಿಚ್ಛೇದನ ಪ್ರಕರಣವೂ ಹೆಚ್ಚುತ್ತಿದೆ. ಇವೆಲ್ಲದಕ್ಕೂ ಕಡಿವಾಣ ಹಾಕುವ ಶಕ್ತಿ ಮಾತೆಯರಿಗೆ ಇದೆ’ ಎಂದು ಪ್ರತಿಪಾದಿಸಿದರು.
ಬೆಂಗಳೂರಿನ ವಿಭು ಅಕಾಡೆಮಿ ಅಧ್ಯಕ್ಷೆ ಡಾ.ವಿ.ಬಿ.ಆರತಿ, ‘ಮೆಕಾಲೆ ಶಿಕ್ಷಣ ಪದ್ಧತಿ ಅನುಸರಿಸಿದ ಪರಿಣಾಮ ಜನಜೀವನ ಬುಡಮೇಲಾಗುವ ಸ್ಥಿತಿ ಬಂದಿದೆ. ಭಾರತೀಯ ಸಂಸ್ಕ್ರತಿ ಅನುಸರಿಸಿದರೆ ಮಾತ್ರ ಸರಿದಾರಿಯಲ್ಲಿ ಸಾಗುತ್ತೇವೆ’ ಎಂದರು.
ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರೂಪಾ ಭಟ್, ಮಠದ ಆಡಳಿಯ ಮಂಡಳಿಯ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಮಾತೃ ಮಂಡಳಿ ಸಂಚಾಲಕಿ ಗೀತಾ ಜೋಶಿ ಇದ್ದರು. ಕೇಂದ್ರ ಮಾತೃ ಮಂಡಲದ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ ಸ್ವಾಗತಿಸಿದರು. ಸುಜಾತಾ ಹೆಗಡೆ ಕೊಡ್ನಗದ್ದೆ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.