ಕಾರವಾರ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಕ್ರಮದ ಭಾಗವಾಗಿ ರಾಜ್ಯ ಸರ್ಕಾರವು ಘೋಷಿಸಿದ ಭಾನುವಾರದ ಲಾಕ್ಡೌನ್ನಗರದಲ್ಲಿ ಸಂಪೂರ್ಣವಾಗಿತ್ತು. ಔಷಧ ಮಾರಾಟ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟು ಸ್ಥಗಿತವಾಗಿತ್ತು.
ಎಂದಿನಂತೆ ಶನಿವಾರ ರಾತ್ರಿ ಎಂಟು ಗಂಟೆಗೆ ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹಾರ ನಿಲ್ಲಿಸಲಾಗಿತ್ತು. ಬಳಿಕ ಭಾನುವಾರ ಇಡೀ ದಿನ ಯಾರೊಬ್ಬರೂ ಅಂಗಡಿ ತೆರೆಯಲಿಲ್ಲ. ಒಂದೆರಡು ಕಡೆ ವರ್ತಕರು, ಹಾರ್ಡ್ವೇರ್ ಅಂಗಡಿಯವರು ಮಳಿಗೆ ತೆರೆಯಲು ಹೊರಟರೂ ಪೊಲೀಸರು ಅವರ ಮನವೊಲಿಸಿ ಮನೆಗೆ ಕಳುಹಿಸಿದರು.ತರಕಾರಿ, ಹಾಲು, ದಿನಸಿ ಮುಂತಾದ ಜೀವನೋಪಾಯ ವಸ್ತುಗಳ ಮಾರಾಟಕ್ಕೆ ಅವಕಾಶವಿದ್ದರೂ ಯಾರೂ ಅಂಗಡಿಗಳನ್ನು ತೆರೆಯದೇ ಸ್ವಯಂ ಪ್ರೇರೇಪಿತರಾಗಿ ಲಾಕ್ಡೌನ್ ಅನ್ನು ಬೆಂಬಲಿಸಿದರು.
ವಿನಾ ಕಾರಣ ನಗರಕ್ಕೆ ಬಂದಿದ್ದವರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದರು. ಸರ್ಕಾರದ ಆದೇಶವನ್ನು ಪಾಲಿಸದಿದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಪುನಃ ಹೋದರು.
ನಗರ ಸಾರಿಗೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ಗಳ ಸಂಚಾರ ಇರಲಿಲ್ಲ.ಆಟೊ, ಟೆಂಪೊ ಚಾಲಕರೂ ವಾಹನಗಳನ್ನು ರಸ್ತೆಗೆ ತರಲಿಲ್ಲ. ಅಂತೆಯೇ ಬಹುತೇಕ ನಾಗರಿಕರು ಮನೆಗಳಲ್ಲೇ ಉಳಿದರು. ಮಟನ್, ಚಿಕನ್ ಖರೀದಿಗೆಂದು ಬೆರಳೆಣಿಕೆಯಷ್ಟು ಮಂದಿ ಬಂದರೂ ಅವರಿಗೆ ನಿರಾಸೆ ಕಾದಿತ್ತು. ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಖಾಲಿ ಕೈಯಲ್ಲಿ ಮನೆಗೆ ಮರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.