ಸಿದ್ದಾಪುರ: ‘ತಾಲ್ಲೂಕಿನ ಒಟ್ಟು 23 ಗ್ರಾಮ ಪಂಚಾಯಿತಿಗಳ ಪೈಕಿ 13ರಲ್ಲಿ ಕಾಂಗ್ರೆಸ್ ಬೆಂಬಲಿತರು ಬಹುಮತ ಹೊಂದಿದ್ದಾರೆ. ಇವುಗಳೊಂದಿಗೆ ಇನ್ನೂ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರಿಗೇ ಅಧಿಕಾರ ಸಿಗುವ ಅವಕಾಶಗಳಿವೆʼ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 110 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆʼ ಎಂದು ಸ್ಪಷ್ಟಪಡಿಸಿದರು.
‘ಆಯ್ಕೆಯಾದ ಹಲವರ ಮೇಲೆ ಬಿಜೆಪಿಯವರು ಒತ್ತಡ ಹಾಕುತ್ತಿದ್ದಾರೆ. ನಮ್ಮ ಪಕ್ಷದ ಬೆಂಬಲಿತರು ಬಿಜೆಪಿಯರ ಆಮಿಷಕ್ಕೆ ಬಲಿಯಾದರೆ, ಅಂತಹವರನ್ನು ಪಕ್ಷದಿಂದ ಉಚ್ಛಾಟಿಸುತ್ತೇವೆʼ ಎಂದರು.
‘ತಾಲ್ಲೂಕಿನ ಬಿದ್ರಕಾನ, ಹಾರ್ಸಿಕಟ್ಟಾ, ತಂಡಾಗುಂಡಿ, ಅಣಲೇಬೈಲ್, ತ್ಯಾಗಲಿ,ಮನ್ಮನೆ, ಕೊರ್ಲಕೈ, ಕಾವಂಚೂರು, ಹಲಗೇರಿ, ವಾಜಗೋಡ, ಕ್ಯಾದಗಿ, ಇಟಗಿ ಮತ್ತು ಕೋಲಸಿರ್ಸಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆಯಲಿದ್ದಾರೆ. ಸೋವಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತರ ಜೊತೆಗೆ ನಮ್ಮ ಬೆಂಬಲಿತರು ಸೇರಿ ಆಡಳಿತ ನಡೆಸಲಿದ್ದಾರೆ. ದೊಡ್ಮನೆ ಮತ್ತು ಕಾನಸೂರು ಗ್ರಾಮ ಪಂಚಾಯಿತಿಯಲ್ಲಿ ಸಮಬಲವಿದ್ದು, ಸಾಧ್ಯವಾದರೆ ನಮ್ಮ ಬೆಂಬಲಿತರೇ ಅಧಿಕಾರಕ್ಕೆ ಬರಲಿದ್ದಾರೆʼ ಎಂದರು.
‘ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಆದರೆ ಚಿಕ್ಕ-ಪುಟ್ಟ ವ್ಯತ್ಯಾಸಗಳಿಂದ ಮತ್ತು ನಮ್ಮ ನಡುವಿನ ಸ್ಪರ್ಧೆಯ ಕಾರಣದಿಂದ ಕೆಲವು ಸ್ಥಾನಗಳನ್ನು ಕಳೆದುಕೊಂಡಿದ್ದೇವೆ’ ಎಂದರು.
ಪಕ್ಷದ ಪ್ರಮುಖರಾದ ಸಾವೇರ್ ಡಿಸಿಲ್ವಾ, ಸೀಮಾ ಹೆಗಡೆ, ಸುನೀಲ್ ಫರ್ನಾಂಡೀಸ್, ವಿವೇಕ ಭಟ್, ಜಯರಾಮ ನಾಯ್ಕ, ರಿಯಾಜ್ ಹೊಸೂರು,ಮಾರುತಿ ಕಿಂದ್ರಿ, ಬಾಲಕೃಷ್ಣ ನಾಯ್ಕ, ಕೆ.ಆರ್.ನಾಯ್ಕ, ಕೆ.ಟಿ.ಹೊನ್ನೆಗುಂಡಿ, ಜಿ.ಟಿ.ನಾಯ್ಕ, ಪಾಂಡುರಂಗ ನಾಯ್ಕ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.