ಶಿರಸಿ: ಕಾಂಗ್ರೆಸ್ ಸರ್ಕಾರ ಸಣ್ಣ ಹಿಡುವಳಿದಾರರ ಪರ ಕಾನೂನು ಜಾರಿಗೆ ತಂದಿದ್ದರೆ, ಈಗಿನ ಬಿಜೆಪಿ ಸರ್ಕಾರ ಈ ಕಾನೂನಿಗೆ ತಿದ್ದುಪಡಿ ತಂದು, ಬಡ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ದೇವರಾಜ ಅರಸು ಅವರು ಉಳುವವನೇ ಒಡೆಯ ಕಾಯ್ದೆ ಜಾರಿಗೆ ತಂದು ಬಡವರಿಗೆ ಅನುಕೂಲ ಮಾಡಿಕೊಟ್ಟರು. ಯಾವ ಉದ್ದೇಶದಿಂದ ರೈತರಿಗೆ ಜಮೀನು ನೀಡಲಾಗಿತ್ತೋ, ಅದಕ್ಕೆ ವ್ಯತಿರಿಕ್ತವಾಗಿ ಈಗ ಮತ್ತೆ ಒಡೆಯನ ಕೈಯಲ್ಲಿ ಜಮೀನನ್ನು ಹಿಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ’ ಎಂದರು.
ಆಡಳಿತ ನಡೆಸುವವರು ರೈತರ ಕಷ್ಟ ತಿಳಿದಿರಬೇಕು. ರೈತ ಕೃಷಿ ಬಿಟ್ಟು ಮನೆಯಲ್ಲಿ ಕುಳಿತರೆ, ದೇಶದ ಸ್ಥಿತಿ ಏನಾಗಬಹುದೆಂದು ಊಹಿಸುವುದೂ ಕಷ್ಟ. ರೈತರ ಜಮೀನು ಪರಭಾರೆ ಆಗಬಾರದು. ಬಂಡವಾಳಶಾಹಿಗಳ ಕೈಗೆ ರೈತನ ಜಮೀನು ಸೇರಬಾರದು. ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಿಂದೆ ಕೋವಿಡ್ 19 ನಿಯಂತ್ರಿಸಲು ಲಾಕ್ಡೌನ್ ಮಾಡಲಾಗಿತ್ತು. ಲಾಕ್ಡೌನ್ ನಿಯಮ ಸಡಿಲಿಕೆಯ ನಂತರ ಅಂತರ ರಾಜ್ಯ, ಅಂತರ ಜಿಲ್ಲೆ ಪ್ರವಾಸಕ್ಕೆ ಅನುಮತಿ ನೀಡುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾ ಸೋಂಕು ಹೆಚ್ಚಲು ಕಾರಣವಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಅವಲೋಕಿಸಿ, ಕೃಷಿ ಹೊರತುಪಡಿಸಿ, ಲಾಕ್ಡೌನ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದರು. ಪ್ರಮುಖರಾದ ಜಗದೀಶ ಗೌಡ, ಎಸ್.ಕೆ. ಭಾಗವತ, ಜ್ಯೋತಿ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.