ADVERTISEMENT

ಬಿಜೆಪಿ ನಾಯಕರು ವಿಷಯಾಧಾರಿತವಾಗಿ ಮಾತನಾಡಲಿ: ದೀಪಕ ದೊಡ್ಡೂರು ಹೇಳಿಕೆ

ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 11:48 IST
Last Updated 3 ಆಗಸ್ಟ್ 2020, 11:48 IST

ಶಿರಸಿ: ‘ಜನರ ದಿಕ್ಕುತಪ್ಪಿಸಿ ಮಾತನಾಡುವಲ್ಲಿ ಪ್ರವೀಣರಾಗಿರುವ ಬಿಜೆಪಿಯವರು ಆರೋಪದ ರಾಜಕಾರಣ ಮಾಡುವ ಬದಲಾಗಿ, ವಿಷಯಾಧಾರಿತವಾಗಿ ಮಾತನಾಡಲಿ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ದೀಪಕ ದೊಡ್ಡೂರು ಟೀಕಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಯಂತ್ರ ಸರಿಯಾಗಿ ಕೆಲಸ ಮಾಡದಿದ್ದಾಗ, ಸಾರ್ವಜನಿಕರ ತೊಂದರೆಯನ್ನು ಸರ್ಕಾರದ ಗಮನಕ್ಕೆ ತರುವುದು ವಿರೋಧ ಪಕ್ಷದ ಕರ್ತವ್ಯ. ಈ ಕೆಲಸವನ್ನು ಕಾಂಗ್ರೆಸ್ ನಿರ್ವಹಿಸುತ್ತಿದೆ’ ಎಂದರು.

‘ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲವೆಂದಾದಲ್ಲಿ ಬಿಜೆಪಿ ಲೆಕ್ಕಪತ್ರವನ್ನು ಜನರ ಮುಂದಿಡಲಿ. ನಾವೇನು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಗನ ಆಸ್ತಿಯನ್ನಾಗಲಿ, ಮುಖ್ಯಮಂತ್ರಿ ಕುಟುಂಬದ ಆಸ್ತಿಯ ಲೆಕ್ಕವನ್ನಾಗಲಿ ಕೇಳಿಲ್ಲ. ಜನರ ಹಣ ಖರ್ಚುಮಾಡಿ ಖರೀದಿಸಿರುವ, ಸಾಮಗ್ರಿಗಳ ಲೆಕ್ಕ ಕೇಳುತ್ತಿದ್ದೇವೆ. ಲಾಕ್‌ಡೌನ್ ಹಾಕಿದಾಗ ಕಾಂಗ್ರೆಸ್ ಅದನ್ನು ಬೆಂಬಲಿಸಿದೆ. ಆದರೂ ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಹಿಂದಿನ ಸರ್ಕಾರವನ್ನು ಅಸ್ಥಿರಗೊಳಿಸಿದ್ದು, ಉಪಚುನಾವಣೆ ನಡೆಸಿದ್ದು, ಸುಗ್ರೀವಾಜ್ಞೆ ಮೂಲಕ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ. ಆಗಸ್ಟ್ 5ರಂದು ನಡೆಯುವ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮವು ಒಂದು ಪಕ್ಷಕ್ಕೆ ಸೀಮಿತವಲ್ಲ. ಹಿಂದೆ ಆಡಳಿತ ನಡೆಸಿದ ವಿವಿಧ ಪಕ್ಷಗಳ ನಾಯಕರ ಕೊಡುಗೆಯಿದೆ ಎಂದು ಹೇಳಿದರು.

ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸಬೇಕು. ಅಧಿಕಾರಕ್ಕೆ ಬಂದು ಮೂರು ತಿಂಗಳುಗಳ ಒಳಗಾಗಿ ಫಾರ್ಮ್ ನಂಬರ್ 3, ಇ ಸ್ವತ್ತು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದನ್ನು ಬಿಜೆಪಿ ನಾಯಕರು ನೆನಪಿಸಿಕೊಳ್ಳಬೇಕು ಎಂದು ಕುಟುಕಿದರು. ಪ್ರಮುಖರಾದ ಜಗದೀಶ ಗೌಡ, ಮಾಲತಿ ಶೆಟ್ಟಿ, ಶ್ರೀನಿವಾಸ ನಾಯ್ಕ,ಸತೀಶ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.