ADVERTISEMENT

5, 6ನೇ ಘಟಕದ ಕಾಮಗಾರಿ ಶೀಘ್ರವೇ ಆರಂಭ: ಸಂಜಯ್ ಕುಮಾರ್

ಕೈಗಾ: ತಲಾ 700 ಮೆಗಾವಾಟ್ ಸಾಮರ್ಥ್ಯ, ವಿದ್ಯುತ್‌ನ ಹೆಚ್ಚುತ್ತಿರುವ ಬೇಡಿಕೆಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2018, 16:23 IST
Last Updated 27 ಆಗಸ್ಟ್ 2018, 16:23 IST
ಕೈಗಾ ಟೌನ್‌ಶಿಪ್‌ನಲ್ಲಿ ಪತ್ರಕರ್ತರಿಗೆ ಆಯೋಜಿಸಲಾಗಿರುವ ನಾಲ್ಕು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅಣು ಶಕ್ತಿ ಇಲಾಖೆಯ ಸಾರ್ವಜನಿಕ ಜಾಗೃತಿ ವಿಭಾಗದ ಮುಖ್ಯಸ್ಥ ರವಿ ಶಂಕರ್ ಮಾತನಾಡಿದರು
ಕೈಗಾ ಟೌನ್‌ಶಿಪ್‌ನಲ್ಲಿ ಪತ್ರಕರ್ತರಿಗೆ ಆಯೋಜಿಸಲಾಗಿರುವ ನಾಲ್ಕು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅಣು ಶಕ್ತಿ ಇಲಾಖೆಯ ಸಾರ್ವಜನಿಕ ಜಾಗೃತಿ ವಿಭಾಗದ ಮುಖ್ಯಸ್ಥ ರವಿ ಶಂಕರ್ ಮಾತನಾಡಿದರು   

ಕಾರವಾರ:ಕೈಗಾದ ಅಣುವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದೆ. ಇವು ತಲಾ 700 ಮೆಗಾವಾಟ್ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದವಿದ್ಯುತ್‌ಗೆದೇಶದಲ್ಲಿ ಹೆಚ್ಚುತ್ತಿರುವಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗಲಿದೆ ಎಂದು ಕೈಗಾದ ಸ್ಥಾನಿಕ ನಿರ್ದೇಶಕ ಸಂಜಯ್ ಕುಮಾರ್ ಹೇಳಿದರು.

ಕೈಗಾ ಟೌನ್‌ಶಿಪ್‌ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿಅವರು ಮಾತನಾಡಿದರು.

ಇದರ ಜತೆಗೇ ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ತಲಾನಾಲ್ಕು ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಇವು ಕೂಡ 700 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಿವೆ. ತಮಿಳುನಾಡಿನ ಕೂಡಂಕುಳಂನಲ್ಲಿ ಮೂರು ಮತ್ತು ನಾಲ್ಕನೇ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇವೆಲ್ಲವೂ ‘ನೀರಿನ ಭಾರಿ ಒತ್ತಡದ ರಿಯಾಕ್ಟರ್‌’ಗಳು (Heavily Pressurised Water Reactors) ಎಂದು ಅವರು ತಿಳಿಸಿದರು.

ADVERTISEMENT

ಕೈಗಾದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿ ಪ್ರತಿ ವರ್ಷ ಪ್ರಶಸ್ತಿಗಳು ಲಭಿಸುತ್ತಿವೆ. ಭಾರತೀಯ ಅಣು ವಿದ್ಯುತ್ ನಿಗಮವು ಸ್ಥಾಪಿಸಿದ ಅತ್ಯಂತಪ್ರಮುಖ ಸ್ಥಾವರಗಳಲ್ಲಿ ಇದು ಮೊದಲ ಸಾಲಿನಲ್ಲಿದೆ. ನಿರಂತರ ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದಾದ್ಯಂತ ಒಂಬತ್ತುಘಟಕಗಳು ದಾಖಲೆ ಮಾಡಿವೆ. ಅವುಗಳಲ್ಲಿ ಐದು ಕೈಗಾದಲ್ಲೇ ಇವೆ ಎಂಬುದು ಗಮನಾರ್ಹ ಎಂದರು.

ಅಣುಶಕ್ತಿ ಇಲಾಖೆಯ ಸಾರ್ವಜನಿಕಜಾಗೃತಿವಿಭಾಗದ ಮುಖ್ಯಸ್ಥ ರವಿ ಶಂಕರ್ ಮಾತನಾಡಿ, ‘ಅಣು ವಿದ್ಯುತ್ ಸ್ಥಾವರಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳಿವೆ. ಮಾಧ್ಯಮಗಳಲ್ಲೂ ಅರ್ಧ ಸತ್ಯ ಮಾತ್ರ ಪ್ರಕಟವಾಗುತ್ತಿವೆ. ಸ್ಥಾವರಗಳಿಂದಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕೈಗಾದಲ್ಲಿರುವ ಸ್ಥಾವರಗಳು ಹೊರಸೂಸುವ ವಿಕಿರಣಗಳ ಪ್ರಮಾಣವು, ನಿಗದಿತ ಮಿತಿಯಿಂದಲೂ ಸಾಕಷ್ಟು ಕಡಿಮೆಯಿದೆ. ಇದು ಬಾಳೆಹಣ್ಣಿನಲ್ಲಿರುವ ಪ್ರಮಾಣಕ್ಕಿಂತಲೂ ಕಡಿಮೆಯಿದೆ. ಆದ್ದರಿಂದ ವದಂತಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

ಪತ್ರಕರ್ತರ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಅಶೋಕ್ ಮಾಲಿಕ್ ಮಾತನಾಡಿ, ‘ಇಂತಹ ಕಾರ್ಯಾಗಾರಗಳಿಂದ ಪತ್ರಕರ್ತರಿಗೆ ಅಣು ವಿದ್ಯುತ್‌ನಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸುತ್ತದೆ. ಮಾಧ್ಯಮದವರಿಗೆ ಸೂಕ್ತ ಮಾಹಿತಿ ನೀಡಿದರೆ ಸಾರ್ವಜನಿಕರಲ್ಲೂ ಗೊಂದಲ ಮೂಡಲು ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

ಕೈಗಾ ಸ್ಥಾವರದ ಮೂರು ಮತ್ತು ನಾಲ್ಕನೇ ಘಟಕಗಳ ಸಹಾಯಕ ನಿರ್ದೇಶಕ ಜೆ.ಆರ್.ದೇಶಪಾಂಡೆ ವೇದಿಕೆಯಲ್ಲಿದ್ದರು. ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ ಮತ್ತು ಅಣು ವಿದ್ಯುತ್ ಇಲಾಖೆ ಜಂಟಿಯಾಗಿ ಆಯೋಜಿಸಿರುವ ನಾಲ್ಕು ದಿನಗಳ ಈ ಕಾರ್ಯಾಗಾರದಲ್ಲಿ ದೇಶದ ವಿವಿಧೆಡೆಯಿಂದ 30ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.