ಮುಂಡಗೋಡ: ‘ಮಂದಿರ, ಮಸೀದಿ, ಚರ್ಚ್ಗಳಿಗೆ ಆಯಾ ಸಮುದಾಯದವರು ಮಾತ್ರ ಹೋಗುತ್ತಾರೆ. ಆದರೆ, ಶಿಕ್ಷಣ ನೀಡುವ ದೇಗುಲಗಳಿಗೆ ಎಲ್ಲ ಸಮುದಾಯ, ವರ್ಗದವರು ಬರುತ್ತಾರೆ. ಮಕ್ಕಳ ಭೌತಿಕ ಮಟ್ಟ ಸುಧಾರಣೆಗೆ ವಿದ್ಯಾ ದೇಗುಲಗಳನ್ನು ಹೆಚ್ಚಿಸಬೇಕಾದ ಅವಶ್ಯಕತೆಯಿದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ವಿ.ಐ.ಎನ್.ಪಿ ಇನ್ಪ್ರಾಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ನ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಾಣವಾದ ತಾಲ್ಲೂಕಿನ ಉಗ್ಗಿನಕೇರಿಯ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ ಜವಾಬ್ದಾರಿಯನ್ನು ಅರಿತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರ ಸುಧಾರಿಸಿದರೆ ಆರೋಗ್ಯವಂತ ಸಮಾಜವನ್ನು ರೂಪಿಸಲು ಸಹಾಯವಾಗುತ್ತದೆ. ಇವೆರಡೂ ಕ್ಷೇತ್ರಗಳಿಗೆ ವಿ.ಐ.ಎನ್.ಪಿ ಕಂಪನಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸರ್ಕಾರಿ ಶಾಲೆಗಳು ಉನ್ನತಿಕರಣವಾಗಬೇಕಾದರೆ, ಸರ್ಕಾರದ ಜೊತೆಗೆ ಸಮೂಹ ಸಂಸ್ಥೆಗಳ ಸಹಕಾರವೂ ಅತ್ಯಗತ್ಯ. ಇಲ್ಲದೆ ಹೋದರೆ ಸರ್ಕಾರಿ ಶಾಲೆಗಳು ಅಭಿವೃದ್ದಿ ಹೊಂದಲು ಕಷ್ಟವಾಗುತ್ತದೆ’ ಎಂದರು.
ವಿ.ಆಯ್.ಎನ್.ಪಿ ಸಂಸ್ಥೆ ಮುಖ್ಯಸ್ಥ ವಿವೇಕ ಹೆಬ್ಬಾರ, ‘ಸಮಾಜದಿಂದ ಪಡೆದ ಲಾಭದ ಕೆಲವಷ್ಟು ಪಾಲನ್ನು ಸಮಾಜ ಸೇವೆಗಾಗಿ ನೀಡಲಾಗುತ್ತಿದೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಭೋಸಲೆ, ಎಚ್.ಎಂ.ನಾಯ್ಕ, ಶಾರದಾ ರಾಠೋಡ, ಬಸವರಾಜ ನಡುವಿನಮನಿ, ವೈ.ಪಿ.ಭುಜಂಗಿ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜು ಕುಟ್ರಿ, ಎಸ್.ಸಿ ಬಸನಗೌಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.