ಕಾರವಾರ:ಜಿಲ್ಲೆಯಲ್ಲಿ ಮತ್ತೆ 83 ಜನರಿಗೆ ಕೋವಿಡ್ 19 ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲೇ ಅತ್ಯಧಿಕ ಪ್ರಕರಣಗಳಿದ್ದು, 50 ಜನರು ಸೋಂಕಿತರಾಗಿದ್ದಾರೆ. 89 ಮಂದಿಗೆ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ಗುಣಮುಖರಾದವರ ಸಂಖ್ಯೆ ಸಕ್ರಿಯ ಪ್ರಕರಣಗಳಿಂತ ಹೆಚ್ಚಿದೆ.
ಭಟ್ಕಳ ತಾಲ್ಲೂಕಿನಲ್ಲಿಎಂಟು, ಶಿರಸಿ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ತಲಾ ಆರು, ಕಾರವಾರ ತಾಲ್ಲೂಕಿನಲ್ಲಿ ಐವರು, ಅಂಕೋಲಾ ತಾಲ್ಲೂಕಿನಲ್ಲಿ ಮೂವರು, ಮುಂಡಗೋಡ ಹಾಗೂ ಸಿದ್ದಾಪುರ ತಾಲ್ಲೂಕುಗಳಲ್ಲಿ ತಲಾ ಇಬ್ಬರು ಹಾಗೂ ಕುಮಟಾ ತಾಲ್ಲೂಕಿನಲ್ಲಿಒಬ್ಬರಿಗೆ ಸೋಂಕು ಖಚಿತವಾಗಿದೆ.
ಜಿಲ್ಲೆಯಲ್ಲಿ ಸೋಂಕಿನ ಮೂಲ ಪತ್ತೆಯಾಗದೇ ಸೋಂಕು ಖಚಿತವಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ.ಆರೋಗ್ಯ ಇಲಾಖೆಯ ಗುರುವಾರದ ಬುಲೆಟಿನ್ನಲ್ಲಿ 52 ಮಂದಿ ಕೋವಿಡ್ ಪೀಡಿತರಾಗಿದ್ದು ಎಲ್ಲಿಂದ ಎಂಬ ಬಗ್ಗೆ ತಿಳಿದು ಬಂದಿಲ್ಲ. ಅವರ ಸೋಂಕಿನ ಮೂಲವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈಗಾಗಲೇ ಸೋಂಕಿತರಾದವರ ಸಂಪರ್ಕಕ್ಕೆ ಬಂದ 24ಮಂದಿಗೆ ಕೋವಿಡ್ ಖಚಿತವಾಗಿದೆ. ಉಳಿದಂತೆ ಐವರಿಗೆಜ್ವರದ (ಐ.ಎಲ್.ಐ) ಲಕ್ಷಣಗಳಿವೆ.ವಿದೇಶ ಮತ್ತು ದೇಶದ ಒಳಗೆ ಪ್ರಯಾಣಮಾಡಿದ ಹಿನ್ನೆಲೆ ಹೊಂದಿರುವ ತಲಾ ಒಬ್ಬರಿಗೂ ಸೋಂಕು ದೃಢಪಟ್ಟಿದೆ.
89 ಮಂದಿ ಗುಣಮುಖ:ಜಿಲ್ಲೆಯಲ್ಲಿ ಗುರುವಾರದ ವೇಳೆಗೆ ಕೋವಿಡ್ನಿಂದ ಗುಣಮುಖರಾದವರು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಬಹುತೇಕ ಸಮಾನವಾಗಿತ್ತು. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಈವರೆಗೆ 705 ಮಂದಿ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ. ಸದ್ಯ 700 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿನಿಂದ ಗುಣಮುಖರಾದ 89 ಮಂದಿಯನ್ನು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಯಿತು. ಈ ಪೈಕಿ ಶಿರಸಿಯಲ್ಲಿ 23, ಹೊನ್ನಾವರದಲ್ಲಿ 16, ಕುಮಟಾಮತ್ತು ಮುಂಡಗೋಡದಲ್ಲಿ ತಲಾ 14,ಹಳಿಯಾಳದಲ್ಲಿ ಒಂಬತ್ತು, ಕಾರವಾರ ಆರು,ಸಿದ್ದಾಪುರದಲ್ಲಿ ನಾಲ್ವರು, ಭಟ್ಕಳದಲ್ಲಿಇಬ್ಬರು, ಯಲ್ಲಾಪುರದಲ್ಲಿ ಒಬ್ಬರು ಸೇರಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ
1,418: ಒಟ್ಟು ಸೋಂಕಿತರು
700: ಸಕ್ರಿಯ ಪ್ರಕರಣಗಳು
705: ಗುಣಮುಖರಾದವರು
13: ಮೃತರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.