
ದಾಂಡೇಲಿ: ನೆರೆಯ ಧಾರವಾಡ ಜಿಲ್ಲೆಯ ಅಳ್ನಾವರದಿಂದ ನಗರಕ್ಕೆ ಡೆಮು ರೈಲು ಸಂಚಾರ ಶನಿವಾರ ಪುನರಾರಂಭಗೊಳ್ಳಲಿದೆ. ಮರು ಚಾಲನೆ ಕಾರ್ಯಕ್ರಮಕ್ಕೆ ಇಲ್ಲಿನ ರೈಲು ನಿಲ್ದಾಣದಲ್ಲಿ ಸಿದ್ಧತೆ ನಡೆದಿವೆ.
2018ರಿಂದ ದಾಂಡೇಲಿ–ಅಳ್ನಾವರ ಡೆಮು ರೈಲು ಸಂಚಾರ ಆರಂಭಗೊಂಡಿತ್ತು. ಕೋವಿಡ್ ಅವಧಿಯಲ್ಲಿ ಪ್ರಯಾಣಿಕರ ಕೊರತೆ ಕಾರಣ ನೀಡಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಭಾಗದ ಜನರ ಬೇಡಿಕೆ ತೀವೃಗೊಂಡ ಹಿನ್ನೆಲೆಯಲ್ಲಿ ರೈಲು ಸಂಚಾರ ಮತ್ತೆ ಆರಂಭಗೊಳ್ಳುತ್ತಿದೆ.
ಫೆ.7ರ ಮಧ್ಯಾಹ್ನ 3.30ಕ್ಕೆ ಡೆಮು ರೈಲುಗಳ ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ದಾಂಡೇಲಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಆರ್.ವಿ.ದೇಶಪಾಂಡೆ ಹಾಗೂ ಸ್ಥಳೀಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆಯ ಕಾರ್ಯಕ್ರಮಕ್ಕಾಗಿ ರೈಲು ನಿಲ್ದಾಣ ಮುಂದೆ ವೇದಿಕೆ ತಯಾರಿ ನಡೆದಿದೆ. ಶುಕ್ರವಾರ ಪ್ರಯೋಗಾರ್ಥವಾಗಿ ಡೆಮು ರೈಲು ಸಂಚಾರ ನಡೆಸಿದೆ.
‘ಫೆ.9 ರಿಂದ ಪ್ರಾರಂಭವಾಗುವ 4 ಬೋಗಿಗಳುಳ್ಳ ರೈಲು ಭಾನುವಾರ ಹೊರತು ಪಡಿಸಿ ದಾಂಡೇಲಿಯಿಂದ ಅಳ್ನಾವರ ಜಂಕ್ಷನ್ಗೆ ದಿನಕ್ಕೆ ಮೂರು ಟ್ರಿಪ್ ನಂತೆ ಸಂಚರಿಸಲಿದೆ. ಪ್ರವಾಸೋದ್ಯಮ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಹುಬ್ಬಳ್ಳಿ ಗೋವಾ ಮುಂಬೈ ಸಂಪರ್ಕ ಸುಲಭವಾಗಲಿದೆ’ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.
ರೈಲು ಸಂಚಾರ ಪುನರಾರಂಭಕ್ಕೆ ದಾಂಡೇಲಿ ಸಮಗ್ರ ಹೋರಾಟ ಸಮಿತಿ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಹೋರಾಟ, ಸ್ಥಳೀಯ ಅನೇಕ ಸಂಘ ಸಂಸ್ಥೆಗಳು ಹೋರಾಟ ಮಾಡಿ ಮನವಿ ನೀಡಿದ್ದರು.
‘ಬಸ್ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಸಿಟಿ ಬಸ್ ಸಂಚಾರ ಆರಂಭಿಸಬೇಕು. ಬೆಂಗಳೂರು, ಮಹಾರಾಷ್ಟ್ರ ಸೇರಿದಂತೆ ಬೃಹತ್ ನಗರಗಳಿಗೆ ಸಂಪರ್ಕ ರೈಲು ವೇಳಾಪಟ್ಟಿ ಸರಿಹೊಂದುವಂತೆ ಈ ರೈಲು ಸಂಚಾರ ಇರಬೇಕು’ ಎನ್ನುವುದು ಸಾರ್ವಜನಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.