ದಾಂಡೇಲಿ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಉದ್ಯೋಗ ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ನಗರದ ಪೊಲೀಸರು ಬೆಳಗಾವಿಯಲ್ಲಿ ಶನಿವಾರ ಬಂಧಿಸಿದ್ದಾರೆ.
ಗದಗ ಜಿಲ್ಲೆಯ ರೋಣದ ಶರಣಬಸಪ್ಪ ಸಂಗನಬಸಪ್ಪ ಬಳಗೇರ (45) ಬಂಧಿತ ಆರೋಪಿ. ಪ್ರಸ್ತುತ ದಾಂಡೇಲಿಯ ಸುಭಾಸನಗರದಲ್ಲಿ ವಾಸವಿದ್ದ ಆತ, ಮೂವರಿಂದ ಹಣ ಪಡೆದು ವಂಚಿಸಿದ್ದಾಗಿ ದೂರು ದಾಖಲಾಗಿತ್ತು.
ಟರ್ಕಿ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಾಗೂ ಅಲ್ಲಿಗೆ ತೆರಳಲು ವೀಸಾ ವ್ಯವಸ್ಥೆ ಮಾಡುವುದಾಗಿ ₹ 2.55 ಲಕ್ಷವನ್ನು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ಆದರೆ, ವೀಸಾ, ನೌಕರಿ ಕೊಡಿಸಲಿಲ್ಲ. ಹಣವನ್ನೂ ಮರಳಿಸಿರಲಿಲ್ಲ. ಈ ಬಗ್ಗೆ ನಿಯಾಝ್ ಹಮ್ಮದ್ ಖಾನಾಪುರ ಎಂಬುವವರು ದೂರು ನೀಡಿದ್ದರು.
ಆರೋಪಿಯಿರುವ ಜಾಗದ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ಮಾಡಿದರು. ಆರೋಪಿಯಿಂದ ಬೇರೆ ಬೇರೆ ಉದ್ಯೋಕಾಂಕ್ಷಿಗಳ 18 ಅಸಲಿ ಪಾಸ್ಪೋರ್ಟ್ಗಳು, ಮೂರು ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್, ಆರು ಎ.ಟಿ.ಎಂ ಕಾರ್ಡ್ಗಳು, ಒಂದು ಹಾರ್ಡ್ ಡ್ರೈವ್, ಮೂರು ಪೆನ್ ಡ್ರೈವ್ಗಳು, ಏಳು ಸಿಮ್ ಕಾರ್ಡಗಳು, ಏಳು ವಾಚ್ಗಳು ಮತ್ತು ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಯು ಹಲವರಿಗೆ ಇದೇ ರೀತಿ ವಂಚಿಸಿರುವ ಶಂಕೆಯಿದೆ. ಆತನಿಗೆ ಹಣ ಕೊಟ್ಟು ಮೋಸ ಹೋಗಿರುವವರು ಇದ್ದರೆ ದಾಂಡೇಲಿ ನಗರ ಠಾಣೆಗೆ ಮಾಹಿತಿ ನೀಡಲು ಪೊಲೀಸರು ತಿಳಿಸಿದ್ದಾರೆ.
ಡಿ.ವೈ.ಎಸ್.ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಪ್ರಭು ಆರ್.ಗಂಗನಹಳ್ಳ, ಪಿ.ಎಸ್.ಐ (ಅಪರಾಧ) ಮಹಾದೇವಿ ನಾಯ್ಕಕೋಡಿ, ಪಿ.ಎಸ್.ಐ ಯಲ್ಲಪ್ಪ.ಎಸ್, ಪೊಲೀಸ್ ಸಿಬ್ಬಂದಿ ಸೋಮಲಿಂಗ ಖಂಡೇಕರ್, ಪ್ರಶಾಂತ ನಾಯ್ಕ, ಭೀಮಪ್ಪ.ಎಚ್, ಮಂಜುನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.