ADVERTISEMENT

ದಾಂಡೇಲಿ | ಕಳ್ಳತನ ಪ್ರಕರಣ: ವಾರಸುದಾರರಿಗೆ ಚಿನ್ನ, ಬೈಕ್ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:20 IST
Last Updated 21 ಫೆಬ್ರುವರಿ 2026, 8:20 IST
ದಾಂಡೇಲಿ ಉಪವಿಭಾಗದ ವ್ಯಾಪ್ತಿಯ ಕಳ್ಳತನ ಹಾಗೂ ನಾಪತ್ತೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಮರಳಿ ವಾರಸುದಾರರಿಗೆ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಶುಕ್ರವಾರ ಹಸ್ತಾಂತರಿಸಿದರು
ದಾಂಡೇಲಿ ಉಪವಿಭಾಗದ ವ್ಯಾಪ್ತಿಯ ಕಳ್ಳತನ ಹಾಗೂ ನಾಪತ್ತೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಮರಳಿ ವಾರಸುದಾರರಿಗೆ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಶುಕ್ರವಾರ ಹಸ್ತಾಂತರಿಸಿದರು   

ದಾಂಡೇಲಿ: ಕಳ್ಳತನ ಹಾಗೂ ನಾಪತ್ತೆ ವಸ್ತುಗಳ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಚಿನ್ನ, ಮೊಬೈಲ್‌ ಹಾಗೂ ಬೈಕ್ ಸೇರಿ ಹಲವು ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ ನಗರಠಾಣೆಯಲ್ಲಿ ನಡೆಯಿತು.

ದಾಂಡೇಲಿ ಉಪ ವಿಭಾಗದ ವ್ಯಾಪ್ತಿಯಲ್ಲಿನ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 160 ಗ್ರಾಂ ಚಿನ್ನ ಹಾಗೂ ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 60 ಗ್ರಾಂ ಚಿನ್ನ ಮತ್ತು ದಾಂಡೇಲಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಮೊಬೈಲ್‌ಗಳು ಹಾಗೂ ಒಂದು ಬೈಕ್, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6 ಮೊಬೈಲ್‌ ಪತ್ತೆ ಹಚ್ಚಿ ಸಂಬಂಧಿಸಿದ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಿವಾನಂದ ಮದರಖಂಡಿ ಸಾರ್ವಜನಿಕರು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗೃತರಾಗಿರಬೇಕು ಹಾಗೂ ನಿರ್ಲಕ್ಷ್ಯ ತೋರಬಾರದು. ಪೊಲೀಸರ ಮೇಲೆ ಜನರಲ್ಲಿ ನಂಬಿಕೆ ವಿಶ್ವಾಸ ಬೆಳೆಸುವ ಉದ್ದೇಶದಿಂದ ಸ್ವತ್ತು ಹಸ್ತಾಂತರ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ADVERTISEMENT

ದಾಂಡೇಲಿ ಸಿಪಿಐ ಶಿವಾನಂದ ಅಂಬೀಗೇರ ಮಾತನಾಡಿ, 2025 ರಿಂದ 2026ರ ಅವಧಿಯಲ್ಲಿ ದಾಂಡೇಲಿ ಉಪ ವಿಭಾಗದಲ್ಲಿ ಒಟ್ಟು 86 ಮೊಬೈಲ್‌ ಮಿಸ್ಸಿಂಗ್ ಅಥವಾ ಕಳ್ಳತನವಾಗಿದ್ದು, ಅವುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ಕಳ್ಳತನದಿಂದ ಜಾಗೃತರಾಗಿ ಇರಬೇಕು ಹಾಗೂ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ಹಿಂಜರಿಯಬಾರದು ಎಂದರು.

ವಸ್ತುಗಳನ್ನು ಪಡೆದ ವಾರಸುದಾರರು ಪೊಲೀಸ್ ಇಲಾಖೆಯ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಿಎಸ್ಐ ಕಿರಣ್ ಪಾಟೀಲ್, ಅಮೀನ ಅತ್ತಾರ, ಜಗದೀಶ್ ನಾಯಕ, ಶಿವಾನಂದ ನಾವಲಗಿ, ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್, ಕೃಷ್ಣ ಗೌಡ ಹರಿಕೇರಿ, ರಾಮನಗರ ಪಿಎಸ್ಐ ಹನುಮಂತ ಹರಿಕುಂಬಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.