ಯಲ್ಲಾಪುರ: ತಾಲ್ಲೂಕಿನ ಪಣಸಗುಳಿ ಸೇತುವೆಯಿಂದ ಆ.24ರಂದು ಕೊಚ್ಚಿ ಹೋಗಿದ್ದ ಲಾರಿಯಲ್ಲಿ ಸಿಲುಕಿಕೊಂಡು ನೀರು ಪಾಲಾಗಿದ್ದ ಕಾರ್ಮಿಕನ ಶವ ಶುಕ್ರವಾರ ಪತ್ತೆಯಾಗಿದೆ. ಕುಮಟಾ ತಾಲ್ಲೂಕಿನ ಬಂಕಿಕೊಡ್ಲ ಸಮೀಪದ ಹನೇಹಳ್ಳಿ ಸಂದೀಪ ಆಗೇರ (35) ಮೃತರು.
ಗಂಗಾವಳಿ ನದಿಯಲ್ಲಿ ಮುಳುಗಿದ್ದ ಲಾರಿಯಲ್ಲಿ ಆರು ಜನರಿದ್ದರು. ಐವರು ಪ್ರಾಣಾಪಾಯದಿಂದ ಬಚಾವಾಗಿದ್ದರು. ಸಂದೀಪ ಲಾರಿಯೊಂದಿಗೆ ನೀರಿನಲ್ಲಿ ಮುಳುಗಿದ್ದರು. ಅವರಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ಹುಡುಕಾಟ ನಡೆಸಿದ್ದರು.
ಲಾರಿಯನ್ನು ಗುರುವಾರ ನದಿಯಿಂದ ಮೇಲೆತ್ತಿದರೂ ಸಂದೀಪ ಅವರ ಸುಳಿವು ಸಿಕ್ಕಿರಲಿಲ್ಲ. ಲಾರಿ ಮುಳುಗಿದ ಜಾಗದಿಂದ ಸ್ವಲ್ಪದೂರದಲ್ಲಿರುವ ದಡದಲ್ಲಿ ಗಿಡಗಳಿಗೆ ಸಿಲುಕಿದ್ದ ಮೃತದೇಹವು ಶುಕ್ರವಾರ ಪತ್ತೆಯಾಯಿತು.
ಮೂರು ದೋಣಿಗಳು, ಒಂದು ಮೋಟಾರ್ ಬೋಟ್ನಲ್ಲಿ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಇಸ್ಮಾಯಿಲ್ ಹುಡೇಕರ್, ಗಂಗಾಧರ ಸಿದ್ದಿ, ಸಣ್ಯಾ ಸಿದ್ದಿ ಅವರು ಮೃತದೇಹವನ್ನು ದಡಕ್ಕೆ ತೆಗದುಕೊಂಡು ಬಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.