ಕಾರವಾರ: ಹುಣ್ಣಿಮೆಯ ದಿನವಾದ ಮಂಗಳವಾರ, ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಸ್ಥಳೀಯರು ಗೋಪೂಜೆ ನೆರವೇರಿಸಿ ಸಂಭ್ರಮಿಸಿದರು.
ದೀಪಾವಳಿ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಊರಿನಲ್ಲಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯಗಳನ್ನು ನಿಲ್ಲಿಸಬಾರದು ಎಂದು ಹುಣ್ಣಿಮೆಯ ದಿನ ದೀಪಾವಳಿಯ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಮೂರು ದಿನಗಳ ಹಿಂದೆ ಬಲೀಂದ್ರನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲಿಸಿದ ರೈತರು, ಬಲಿಪಾಡ್ಯದ ದಿನವಾದ ಮಂಗಳವಾರ ಗೋವುಗಳನ್ನು ಸಿಂಗರಿಸಿದರು. ರೊಟ್ಟಿ, ಪಚ್ಚೆತೆನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೋರಿಗಳನ್ನು ಬಣ್ಣದ ಕಾಗದದ ಹೂವುಗಳಿಂದ ಸಿಂಗರಿಸಿ ಬೆದರಿಸುವ ಆಚರಣೆ ಹಮ್ಮಿಕೊಂಡರು. ಈ ವೇಳೆ ಹೋರಿಗಳ ಓಟ, ಹಾರಾಟ, ರೈತರ ಸಂಭ್ರಮ ನೋಡುಗರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.