ಕುಮಟಾ: ಹೆದ್ದಾರಿ ಬದಿ ಗುಡ್ಡ ಕುಸಿದು ದರುಂತ ಸಂಭವಿಸಿದ ಅಂಕೋಲಾ ತಾಲ್ಲೂಕಿನ ಶಿರೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರೆ ಎನ್ನುವ ಎಲ್ಲರ ನಿರೀಕ್ಷೆ ಸುಳ್ಳಾಗಿ ನಿರಾಶೆ ಉಂಟಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಶಿರೂರು ಬಳಿ ಹೆದ್ದಾರಿಯಂಚಿನ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊಳೆಗದ್ದೆ ಹೆದ್ದಾರಿ ಟೋಲ್ ನಾಕಾದಲ್ಲಿ ಕಳೆದ ಒಂದು ವಾರದಿಂದ ನಿಂತಿದ್ದ ಸುಮಾರು 200 ಲಾರಿ ಸಿಬ್ಬಂದಿಗೆ ಸೋಮವಾರ ದಿನಸಿ ಸಾಮಗ್ರಿ ವಿತರಿಸಿ ಮಾತನಾಡಿದರು.
ಅಷ್ಟು ದೂರದಿಂದ ಬಂದ ಮುಖ್ಯಮಂತ್ರಿ ಅವರು ಶಿರೂರು ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ, ಮನೆ ಬಗ್ಗೆ ನೆರವು ನೀಡಿದ್ದರೆ ಅವರಿಗೆ ಸಮಾಧಾನವಾಗುತ್ತಿತ್ತು. ಆದರೆ ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ ಸಾಂತ್ವನ ಹೇಳುವುದಕ್ಕೂ ಮುಖ್ಯ ಮಂತ್ರಿ ಮುಂದಾಗದಿರುವುದು ಬೇಸರದ ಸಂಗತಿ. ಬಿಜ.ಪಿ ರಾಜ್ಯಾ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೆಳಿ ತಮ್ಮ ಕೈಲಾದ ಆರ್ಥಿಕ ನೆರವು ನೀಡಿದ್ದಾರೆ ಎಂದರು.
ಹೊಳೆಗದ್ದೆ ಟೋಲಾ ನಾಕಾದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಲಾರಿಗಳು ನಿಂತಿವೆ. ಲಾರಿ ಸಿಬ್ಬಂದಿಗೆ ಊಟ, ನೀರು, ಸ್ನಾನಕ್ಕೆ ತೊಂದರೆ ಆದಾಗ ಅವರಲ್ಲೊಬ್ಬ ಚಾಲಕ ಸೋಮವಾರ ಬೆಳಿಗ್ಗೆ ನನಗೆ ಕರೆ ಮಾಡಿ ಸಹಾಯ ಯಾಚಿಸಿದರು. ತಕ್ಷಣ ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿ ಅವರಿಗೆ ಊಟ, ತಿಂಡಿಗೆ ಆಗುವಷ್ಟು ಅಡುಗೆ ಸಾಮಗ್ರಿ ನೀಡಿದ್ದೇವೆ ಎಂದರು.
ಸ್ಥಳೀಯ ಐ.ಆರ್.ಬಿ ಕಟ್ಟಡದಲ್ಲಿ ಅವರಿಗೆ ಅಡುಗೆ ಮಾಡಿ ಬಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದೆ ಏನೇ ಸಹಾಯ ಬೇಕಿದ್ದರೂ ಅವರು ಕರೆ ಮಾಡಿದರೆ ನೆರವು ನೀಡಲಾಗುವುದು. ಸ್ಥಳೀಯರು ಅವರಿಗೆ ನಿತ್ಯ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಐ.ಹೆಗಡೆ, ಪಕ್ಷದ ವಿಶ್ವನಾಥ ನಾಯ್ಕ, ಸುಬ್ರಹ್ಮಣ್ಯ ಶೆಟ್ಟಿ, ಕುಮಾರ ಕವರಿ ಇದ್ದರು. ಪಕ್ಷದ ಕಾರ್ಯಕರ್ತರಾದ ಕುಮಾರÀ ಭಟ್ಟ, ಕೃಷ್ಣ ನಾಯ್ಕ, ಕೇಶವ ಮಡಿವಾಳ, ಉದಯ ಭಂಡಾರಿ, ಐ.ಆರ್.ಬಿ ಅಧಿಕಾರಿ ವಿಕಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.