ಕಾರವಾರ:ಮೇರುನಟ ಡಾ.ರಾಜಕುಮಾರ್ ಎಲ್ಲ ಸಮುದಾಯಗಳ ಅಭಿಮಾನಿಗಳಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ. ಅವರ ನಟನೆಗೆ ಮಾರು ಹೋಗದವರಿಲ್ಲ. ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ವಿ.ಎಮ್.ಹೆಗಡೆಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿನಗರದಲ್ಲಿ ಬುಧವಾರ ಆಯೋಜಿಸಲಾದ ಡಾ.ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ತಮ್ಮ ನಟನೆಯ ಮೂಲಕ ಮನೆ ಮಾತಾಗಿದ್ದ ಡಾ.ರಾಜಕುಮಾರ್ ವೃತ್ತಿ ಬದುಕು ಆದರ್ಶವಾಗಿದೆ. ಅವರ ಜೀವನದ ಆದರ್ಶಗಳನ್ನುಅರಿತು ಅನುಸರಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಪುರುಷೋತ್ತಮ ಮಾತನಾಡಿ, ‘ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂಬ ಹೆಗ್ಗಳಿಕೆ ಪಡೆದಿರುವಅವರ ಸರಳ ನಡೆ ನುಡಿ ಆಕರ್ಷಕವಾದುದು. ಅವರು ತಮ್ಮ ವೈರಿಗಳನ್ನೂ ಪ್ರೀತಿಸಿದವರು’ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಹಿಮಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ‘ಡಾ.ರಾಜಕುಮಾರ್ ಬಾಲ್ಯದಲ್ಲೇರಂಗಪ್ರವೇಶ ಮಾಡಿ, 1954ರಲ್ಲಿ ಬೆಡರ ಕಣ್ಣಪ್ಪ ಚಲನಚಿತ್ರದಲ್ಲಿ ನಟರಾದರು. ಅವರು ಅಭಿನಯವನ್ನೇ ದೇವರು ಎಂದು ಆರಾಧಿಸುತ್ತಿದ್ದರು. ಅವರ ವ್ಯಕ್ತಿತ್ವವೇ ಒಂದು ವಿಶ್ವವಿದ್ಯಾಲಯವಿದ್ದಂತೆ. ಮೇರು ನಟನಾಗಿ ಬೆಳೆದರೂ ತಾವು ಕಲಿಯುವುದು ಇನ್ನೂ ಇದೆ ಎನ್ನುತ್ತಿದ್ದರು. ಸಮಾಜ ಬದಲಾವಣೆಗೆ ಪ್ರೇರೇಪಿಸುವಂತಹ ವ್ಯಕ್ತಿತ್ವ ರಾಜಕುಮಾರ ಅವರದಾಗಿತ್ತು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.