ADVERTISEMENT

ಪುರಾತನ ಮನೆಗಳ ಚಾವಣಿ ನೆಲಸಮ

ಗೋಕರ್ಣದಲ್ಲಿ ಅತಿಕ್ರಮಣ ತೆರವು: ಸೂಚನೆ ನೀಡದೇ ಕಾರ್ಯಾಚರಣೆಯ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:06 IST
Last Updated 19 ಜುಲೈ 2019, 20:06 IST
ಗೋಕರ್ಣದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು
ಗೋಕರ್ಣದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು   

ಗೋಕರ್ಣ: ಇಲ್ಲಿನ ಚರಂಡಿಯನ್ನುಅತಿಕ್ರಮಣ ಮಾಡಿದ್ದ ಕಟ್ಟಡಗಳಭಾಗಗಳನ್ನು ತಾಲ್ಲೂಕು ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರ ತೆರವುಗೊಳಿಸಲಾಯಿತು. ನಕ್ಷೆ ತೋರಿಸದೇ ನೋಟಿಸ್ ನೀಡದೇ ಕಾರ್ಯಾಚರಣೆ ಮಾಡಲಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಂತ ಜಾಗದಲ್ಲಿ ಇದ್ದ ಕಟ್ಟಡ, ಚಾವಣಿಗಳನ್ನು (ಮಾಡು) ತೆರವುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಮುದ್ರ ದಡದಿಂದ ಪ್ರಾರಂಭವಾದ ಕಾರ್ಯಾಚರಣೆಯು ರಥಬೀದಿಯ ಅರ್ಧದವರೆಗೆ ಬಂದು ನಿಂತಿದೆ. ಸಮುದ್ರ ದಂಡೆಯ ಮೇಲೆ ಗ್ರಾಮ ಪಂಚಾಯ್ತಿಯ ಸಮ್ಮುಖದಲ್ಲಿಯೇ ಮೂರು ಬಾರಿ ಸರ್ವೆ ಮಾಡಲಾಗಿದೆ. ಆ ಜಾಗವು ‘ಮಾಲ್ಕಿ’ ಎಂದು ಸಾಬೀತಾಗಿದೆ. ಆದರೂ ಅದರಲ್ಲಿದ್ದ ಅಂಗಡಿಯಚಾವಣಿಯನ್ನು ತೆಗೆಯಲಾಗಿದೆ. ಕೋರ್ಟಿನಲ್ಲಿ ವ್ಯಾಜ್ಯ ಇದ್ದಾಗಲೂ ಅಧಿಕಾರಿಗಳು ದಬ್ಬಾಳಿಕೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಸ್ಥಳದ ಮಾಲೀಕ ಗಣೇಶ ಜೋಗಳೆಕರ್ ಆಪಾದಿಸಿದರು.

‘ರಥಬೀದಿಯಲ್ಲಿಯೂ ಮನೆಗೆ ಹೋಗುವ ಮೆಟ್ಟಿಲು, ಮಳೆಯ ನೀರು ಬರಬಾರದೆಂದುಚರಂಡಿಯಮೇಲೆನಿರ್ಮಿಸಿದ್ದ ಮಾಡನ್ನು ತೆಗೆಯಲಾಗಿದೆ. ಕಾರ್ಯಾಚರಣೆಗೆಇರುವ ಆದೇಶದ ಪ್ರತಿಯನ್ನು ಕೇಳಿದರೂ ಅಧಿಕಾರಿಗಳು ತೋರಿಸಿಲ್ಲ’ ಎಂದು ಪ್ರಶಾಂತ ಹಿರೇಗಂಗೆ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೇವಲ ಹೆಂಗಸರು, ಮಕ್ಕಳು ಇದ್ದ ಮನೆಯಲ್ಲೂ ಚರಂಡಿಯ ಮೇಲಿದೆ ಎಂಬ ಕಾರಣವೊಡ್ಡಿ ಇಡೀ ಚಾವಣಿಯನ್ನೇ ಕೆಡವಿದ್ದಾರೆ. ಇದು ಅತ್ಯಂತ ಅಮಾನವೀಯ ಸಂಗತಿ’ ಎಂದು ಅನ್ನಪೂರ್ಣ ಶಂಕರಲಿಂಗ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಾಚರಣೆಯಲ್ಲಿ ತಾಲ್ಲೂಕುಪಂಚಾಯ್ತಿಕಾರ್ಯ ನಿರ್ವಾಹಕಅಧಿಕಾರಿ ಸಿ.ಟಿ.ನಾಯ್ಕ, ತಹಶೀಲ್ದಾರ್ ಮೇಘರಾಜ ನಾಯ್ಕ, ಲೋಕೋಪಯೋಗಿ ಇಲಾಖೆ ಎಂಜನಿಯರ್ ಆರ್.ಎಸ್.ಶಾನಭಾಗ್, ತಾಲ್ಲೂಕುಎಂಜಿನಿಯರಿಂಗ್ವಿಭಾಗದ ಆರ್.ಜಿ.ಗುನಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾಲಕ್ಷ್ಮಿಬಡ್ತಿ, ಉಪಾಧ್ಯಕ್ಷ ಶೇಖರ ನಾಯ್ಕ, ತಾಲ್ಲೂಕುಪಂಚಾಯ್ತಿ ಸದಸ್ಯ ಮಹೇಶ ಶೆಟ್ಟಿ, ಪಿ.ಡಿ.ಒ ಬಾಲಕೃಷ್ಣ ನಾಯ್ಕ ಇದ್ದರು. ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿತ್ತು.

ನೋಟಿಸ್ ನೀಡಲಾಗಿತ್ತು:ಅತಿಕ್ರಮಣ ತೆರವು ಕಾರ್ಯಾಚರಣೆಯ ಬಗ್ಗೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸಿ.ಟಿ.ನಾಯ್ಕ ಸುದ್ದಿಗೋಷ್ಠಿ ನಡೆಸಿದರು.

‘ರಾಜ್ಯ ಸರ್ಕಾರದ ಸುತ್ತೋಲೆಯಂತೆಹಾಗೂಜಿಲ್ಲಾಧಿಕಾರಿ ಆದೇಶದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ. ಅತಿಕ್ರಮಣ ಮಾಡಿದ್ದವರಿಗೆ ನಾವು ಈಗಾಗಲೇ ಮೂರು ಬಾರಿ ನೋಟಿಸ್ ಕೊಟ್ಟಿದ್ದೇವೆ. ಧ್ವನಿವರ್ಧಕದಲ್ಲಿ ತಿಳಿವಳಿಕೆಯನ್ನೂ ನೀಡಿದ್ದೇವೆ. ಅದರಂತೆ ಕಾರ್ಯಾಚರಣೆ ನಡೆಸಿದ್ದೇವೆ. ಮೊದಲೇ ತಿಳಿಸಿದಂತೆ ಗಟಾರದ ಮೇಲಿರುವ ಎಲ್ಲವನ್ನೂ ತೆರವುಗೊಳಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ನಮ್ಮಿಂದ ತಪ್ಪಾಗಿದೆ’:ಮನೆಯೊಂದರ ಚಾವಣಿ ಚರಂಡಿಯಮೇಲೆನಾಲ್ಕು ಇಂಚುಗಳಷ್ಟು ಬಂದಿದೆ ಎಂದು ಇಡೀಚಾವಣಿಯನ್ನೇ ಉರುಳಿಸಲಾಗಿದೆ. ಇದುನಾಗರಿಕರ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲೇ ಇದ್ದಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು.

ಈ ವೇಳೆ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿ, ‘ನಮ್ಮಿಂದ ತಪ್ಪಾಗಿದೆ. ಸರಿಪಡಿಸಿಕೊಡುತ್ತೇವೆ’ ಎಂದುಭರವಸೆ ನೀಡಿದರು. ಬಳಿಕ ಪರಿಸ್ಥಿತಿ ತಿಳಿಯಾಯಿತು.

‘ಠರಾವು ಕೂಡ ಕಾರಣ’:‘ಈ ಕಾರ್ಯಾಚರಣೆಗೆಗ್ರಾಮ ಪಂಚಾಯ್ತಿಯ ಠರಾವು ಹಾಗೂ ಕೆಲವು ಸ್ಥಳೀಯರ ಅರ್ಜಿಗಳೂ ಕಾರಣವಾಗಿದೆ. ನಾಗರಿಕರು ನಮ್ಮನ್ನು ದೂರಲು ಕಾರಣವಿಲ್ಲ. ನಾವು ಸರ್ಕಾರದ ಆದೇಶದಂತೆ ನಮ್ಮ ಕೆಲಸವನ್ನು ಮಾಡಿದ್ದೇವೆ. ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.ಗಟಾರದ ಹೊರತಾಗಿ ಗ್ರಾಮ ಪಂಚಾಯ್ತಿಯ ಇತರ ಕಡೆ ನಡೆದ ಅತಿಕ್ರಮಣವನ್ನೂ ಖುಲ್ಲಾ ಪಡಿಸಲಾಗುವುದು’ ಎಂದು ಸಿ.ಟಿ.ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.