ADVERTISEMENT

‘ಪತ್ರಕರ್ತರ ಅನುಭವ ಎಲ್ಲರಿಗೂ ಸಿಗದು’

ಕಾರವಾರ ತಾಲ್ಲೂಕಿನ ಚಿತ್ತಾಕುಲಾದಲ್ಲಿ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ರೂಪಾಲಿ ನಾಯ್ಕ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 12:15 IST
Last Updated 1 ಜುಲೈ 2019, 12:15 IST
ಕಾರವಾರ ತಾಲ್ಲೂಕಿನ ಚಿತ್ತಾಕುಲಾದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರಾದ ನಾರಾಯಣ ಹೆಗಡೆ, ಪಿ.ಕೆ.ಚಾಪಗಾಂವಕರ್, ದಿನೇಶ ಹಿತ್ತಲದವರ್ ಅವರಿಗೆ ‘ಟ್ಯಾಗೋರ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಚಿತ್ರದಲ್ಲಿದ್ದಾರೆ.
ಕಾರವಾರ ತಾಲ್ಲೂಕಿನ ಚಿತ್ತಾಕುಲಾದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರಾದ ನಾರಾಯಣ ಹೆಗಡೆ, ಪಿ.ಕೆ.ಚಾಪಗಾಂವಕರ್, ದಿನೇಶ ಹಿತ್ತಲದವರ್ ಅವರಿಗೆ ‘ಟ್ಯಾಗೋರ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಚಿತ್ರದಲ್ಲಿದ್ದಾರೆ.   

ಕಾರವಾರ:‘ವರದಿಗಾರರಿಗೆ ಸಿಗುವ ಅನುಭವ ಎಲ್ಲರಿಗೂ ಸಿಗುವುದಿಲ್ಲ. ಅವರ ಒಂದು ಚಿಂತನೆ, ವರದಿಯಫಲ ಸರ್ಕಾರದ ಮಹತ್ವದ ಯೋಜನೆಯಾಗಬಲ್ಲದು’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಜಿಲ್ಲಾಕೇಂದ್ರ ಕಾರ್ಯನಿರತರ ಪತ್ರಕರ್ತರ ಸಂಘವು ತಾಲ್ಲೂಕಿನ ಚಿತ್ತಾಕುಲಾದ ನಿರಾಶ್ರಿತರ ಕಾಲೊನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಮತ್ತು ಆರೋಗ್ಯ ತಪಾಸಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯ 78 ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿದಾನಿಗಳ ಮೂಲಕ ಬ್ಯಾಗ್ ವಿತರಣೆಯ ಬಗ್ಗೆ ಶ್ಲಾಘಿಸಿದ ಅವರು, ‘ಈ ರೀತಿಯ ಆಲೋಚನೆಗಳು ಸರ್ಕಾರಕ್ಕೆ ಸಲಹೆ ಕೊಟ್ಟ ರೀತಿಯಲ್ಲಿ ಇರುತ್ತವೆ. ಈ ಹಿಂದೆ ಶೂ ವಿತರಣೆ ಮಾಡಲಾಗಿತ್ತು. ಅದೀಗ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಇದೇ ರೀತಿ ಮುಂದೊಂದು ದಿನ ಬ್ಯಾಗ್‌ಗಳನ್ನೂ ಕೊಡುವ ಯೋಜನೆ ರೂಪಿಸಲಿ’ ಎಂದು ಆಶಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಎಲ್ಲರನ್ನೂ ಸಮಾನರು ಎಂದು ಪರಿಗಣಿಸುವ ಪ್ರಜಾಪ್ರಭುತ್ವವನ್ನು ಕಾಯುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತದೆ. ಹೆಚ್ಚು ಕ್ರಿಯಾಶೀಲವಾಗಿರುವ ಈ ಕ್ಷೇತ್ರ ಅತ್ಯಂತ ಸವಾಲಿನದ್ದು. ಹಲವು ಬಾರಿ ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತವೆ. ಅವರಿಗೆ ಭದ್ರತೆ ಮತ್ತು ಸೇವಾಭದ್ರತೆ ಕೊಡುವುದು ಸಮಾಜದ ಕೆಲಸವೂ ಹೌದು.ಸರ್ಕಾರವೂ ಈ ಬಗ್ಗೆ ಚಿಂತನೆ ನಡೆಸುತ್ತಿದೆ’ ಎಂದು ಹೇಳಿದರು.

ವೈದ್ಯರ ದಿನಾಚರಣೆಯ ಬಗ್ಗೆ ಮಾತನಾಡಿದ ಅವರು, ‘ವೈದ್ಯರು ಕೂಡ ಮನುಷ್ಯರು. ಎಲ್ಲ ಸಂದರ್ಭದಲ್ಲೂ ಅವರಿಂದ ಶೇ 100ರಷ್ಟು ಪರಿಪೂರ್ಣತೆ ನಿರೀಕ್ಷಿಸಲಾಗದು. ಅವರ ಉತ್ತಮ ಕಾರ್ಯಗಳಿಗೆ ಆಡಳಿತಜೊತೆಗಿರುತ್ತದೆ’ ಎಂದು ಭರವಸೆ ನೀಡಿದರು.

ಚಿತ್ತಾಕುಲಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿದರು.ಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ರಾಮದಾಸ ಆಚಾರಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಚ್ಯುತಕುಮಾರ ಯಲ್ಲಾಪುರ, ಗಣೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸುಭಾಸ ಧೂಪದಹೊಂಡ ವಂದಿಸಿದರು.

ಆರೋಗ್ಯ ಉಚಿತ ಚಿಕಿತ್ಸೆ:ಪತ್ರಿಕಾ ದಿನಾಚರಣೆಯ ಜೊತೆಗೇ ಆರೋಗ್ಯ ತಪಾಸಣೆಯ ಉಚಿತ ಶಿಬಿರವನ್ನುಸತ್ಯಸಾಯಿ ಸೇವಾ ಸಂಸ್ಥೆಯ ಸಾಯಿ ಧನ್ವಂತರಿ ವಾಹನದ ಮೂಲಕಆಯೋಜಿಸಲಾಯಿತು.137 ಜನರಿಗೆ ಉಚಿತ ಚಿಕಿತ್ಸೆ ನೀಡಲಾಯಿತು.

ಸತ್ಯಸಾಯಿ ಸೇವಾ ಸಮಿತಿಯ ವೈದ್ಯರಾದ ಡಾ.ಚಂದ್ರಶೇಖರ ಕದಂ, ಡಾ.ಕಿರಣ ರೇವಣಕರ್, ಡಾ.ಜ್ಯೋತ್ಸ್ನಾ ರೇವಣಕರ್, ಜಿಲ್ಲಾ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಸುಭಾಷ ತಾಂಡೇಲ, ಸ್ಥಳೀಯಪ್ರಾಥಮಿಕ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ.ಸುದಿತಾ ಪೆಡ್ನೇಕರ್ ಅವರು ತಪಾಸಣೆ ನಡೆಸಿದರು. ಸಾಯಿ ಸೇವಾದಳದ 34 ಕಾರ್ಯಕರ್ತರು ಸಹಕರಿಸಿದರು.ವೈದ್ಯರ ದಿನಾಚರಣೆಯ ಅಂಗವಾಗಿ ಎಲ್ಲ ವೈದ್ಯರು ಹಾಗೂ ಸತ್ಯಸಾಯಿ ಸೇವಾ ಸಮಿತಿಯ ರಾಮದಾಸ ಆಚಾರಿ ಅವರನ್ನು ಸನ್ಮಾನಿಸಲಾಯಿತು.

‘ಟ್ಯಾಗೋರ್ ಪ್ರಶಸ್ತಿ’ ಪ್ರದಾನ:ಪತ್ರಕರ್ತರಾದ ನಾರಾಯಣ ಹೆಗಡೆ, ಪಿ.ಕೆ.ಚಾಪಗಾಂವಕರ್ ಹಾಗೂ ಸುದ್ದಿವಾಹಿನಿಯ ಕ್ಯಾಮೆರಾಮ್ಯಾನ್ ದಿನೇಶಯಲ್ಲಾಪುರಅವರಿಗೆ ‘ಟ್ಯಾಗೋರ್ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಪ್ರಶಾಂತ ಮಹಾಲೆ, ಎಸ್.ಎಸ್.ಸಂದೀಪ ಸಾಗರ, ವಾಸುದೇವ ಗೌಡ, ಗುರುಪ್ರಸಾದ ಹೆಗಡೆ ಹಾಗೂ ದೇವರಾಜ ನಾಯ್ಕ ಅವರಿಗೆ ‘ಯುವ ಸಾಧಕ ಪತ್ರಕರ್ತ’ಎಂದು ಪುರಸ್ಕರಿಸಲಾಯಿತು.

ಶತಮಾನದ ಪತ್ರಿಕೆ ಸಂಪಾದಕರಿಗೆ ಸನ್ಮಾನ:ಸತತ 103 ವರ್ಷಗಳಿಂದ ಮುದ್ರಣವಾಗುತ್ತಿರುವ ರಾಜ್ಯದ ಏಕೈಕ ಪತ್ರಿಕೆ ‘ಕಾನಡಾ ವೃತ್ತ’ದ ಸಂಪಾದಕ ಶ್ರೀಕಾಂತ ಶಾನಬಾಗ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.