ADVERTISEMENT

ಮಕ್ಕಳ ಪರೀಕ್ಷೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 14:42 IST
Last Updated 10 ಮಾರ್ಚ್ 2020, 14:42 IST

ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯಂತೆ ನಾಲ್ಕರಿಂದ ಒಂಬತ್ತನೇ ತರಗತಿಗಳ ಎರಡನೇ ಸೆಮೆಸ್ಟರ್ ಪರೀಕ್ಷೆಯನ್ನು ಮುಂಚಿತವಾಗಿ ನಡೆಸಲಾಗುತ್ತದೆ. ಪೂರ್ವನಿಗದಿಯಾಗಿದ್ದ ಮಾ.23ರಿಂದ 28ರವರೆಗೆ ಪರೀಕ್ಷೆಗಳು, ಮಾ.11ರಿಂದ 17ರವರೆಗೆ ನಡೆಯುತ್ತವೆ. ಕೋವಿಡ್–19 ಭಾರತದಲ್ಲಿ ಪತ್ತೆಯಾಗಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಪರೀಕ್ಷೆಗಳನ್ನು ಮುಂಚಿತವಾಗಿ ನಡೆಸುವಂತೆ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ಪಾಲಕರು ಇತ್ತ ಗಮನಹರಿಸಬೇಕು ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ಟಿಇಟಿ ಪರೀಕ್ಷೆ 15ಕ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಯು ನಗರದ ಐದು ಕೇಂದ್ರಗಳಲ್ಲಿ ಮಾ.15ರಂದು ನಡೆಯಲಿದೆ. ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಎಂಇಎಸ್ ವಾಣಿಜ್ಯ ಕಾಲೇಜು, ಆವೆಮರಿಯಾ ಪ್ರೌಢಶಾಲೆಗಳಲ್ಲಿ ಬೆಳಿಗ್ಗೆ 9.30ರಿಂದ 12 ಗಂಟೆ, ಮಧ್ಯಾಹ್ನ 2ರಿಂದ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ.

ADVERTISEMENT

ಮಹಿಳೆಗೆ ಕೆಎಫ್‌ಡಿ ದೃಢ

ಇಲ್ಲಿನ ರೋಟರಿ ಆಸ್ಪತ್ರೆಗೆ ನಾಲ್ಕು ದಿನಗಳ ಹಿಂದೆ ದಾಖಲಾಗಿದ್ದ ಮಹಿಳೆಯೊಬ್ಬರಿಗೆ ಮಂಗನ ಕಾಯಿಲೆ ಬಂದಿರುವುದು ದೃಢಪಟ್ಟಿದೆ. ಜ್ವರದಿಂದ ಬಳಲುತ್ತಿದ್ದ ಕಾನಸೂರು ಸಮೀಪದ ಪಾರ್ವತಿ ಎಂಬುವವರು ರೋಟರಿಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ರಕ್ತದ ಮಾದರಿಯ ವರದಿ ಬಂದಿದ್ದು, ಆ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಾಯಕ ಭಟ್ಟ ಪ್ರತಿಕ್ರಿಯಿಸಿದ್ದಾರೆ.

ಮಾರಿಕಾಂಬಾ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್–19 ಸಂಬಂಧ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಜ್ವರ, ಉಸಿರಾಟದಿಂದ ಬಳಲುತ್ತಿರುವವರು ಆಸ್ಪತ್ರೆಗೆ ದಾಖಲಾದರೆ, ತಕ್ಷಣ ಮಾಹಿತಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಜಾತ್ರೆ ಆರಂಭವಾದಾಗಿನಿಂದ ಬೇಧಿಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.