ಕುಮಟಾ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಹಾಸತಿ ದೇವಾಲಯ ವೃತ್ತದಲ್ಲಿರುವ ನಂದಿನಿ ಹಾಲಿನ ಉತ್ಪನ್ನ ಮಾರಾಟ ಕೇಂದ್ರದಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಅವಧಿ ಮೀರಿದ ಹಾಲು ಹಾಗೂ ತಿನಿಸು ಮಾರಾಟ ಮಾಡುವುದನ್ನು ಪತ್ತೆಹಚ್ಚಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಜಶೇಖರ್, ‘ಯಶವಂತ ಶಾನಭಾಗ ಅವರಿಗೆ ಸೇರಿದ ನಂದಿನಿ ಹಾಲಿನ ಉತ್ಪನ್ನ ಮಾರಾಟ ಕೇಂದ್ರದಲ್ಲಿ ಅವಧಿ ಮೀರಿದ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಹಾಲಿನ ಪ್ಯಾಕೆಟ್ಗಳ ಮೇಲೆ ಇರುವ ದಿನಾಂಕದಂದೇ ಅವುಗಳನ್ನು ಮಾರಾಟ ಮಾಡಬೇಕು. ಆಹಾರ ಸುರಕ್ಷಾ ನಿಯಮ ಪ್ರಕಾರ ಒಂದು ದಿನ ಮೀರಿದ ಹಾಲಿನ ಪ್ಯಾಕೆಟ್ ಅನ್ನು ಗ್ರಾಹಕರಿಗೆ ಮಾರಾಟ ಮಾಡುವುದೂ ಅಪರಾಧ’ ಎಂದರು.
‘ನಂದಿನಿ ಪಾರ್ಲರ್ನಲ್ಲಿ ಸೆ.1ರಿಂದ 3ನೇ ದಿನಾಂಕದ ಅವಧಿ ಮೀರಿದ ಹಾಲಿನ ಪ್ಯಾಕೇಟ್ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ನಂದಿನಿ ಬ್ರಾಂಡಿನ್ 8 ಕೌ ಮಿಲ್ಕ್ ಪ್ಯಾಕೇಟ್, 35 ಶುಭಂ ಹಾಲಿನ ಪ್ಯಾಕೇಟ್ ಹಾಗೂ 68 ಟೋನ್ಡ್ ಹಾಲಿನ ಪ್ಯಾಕೇಟ್ ಹಾಗೂ ಒಂದು ಬಿಸ್ಕತ್ ಪ್ಯಾಕೆಟ್ ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದು ಸೀಲ್ ಮಾಡಲಾಗಿದ್ದು, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ ಸೆಕ್ಷನ್ 52ರ ಪ್ರಕಾರ ತಪ್ಪು ಮಾಹಿತಿ ನೀಡಿ ಮಾರಾಟ ಮಾಡುವ ಅಪರಾಧದ ಮೇಲೆ ಕ್ರಮ ಕೈಕೊಳ್ಳಲಾಗುವುದು. ಈ ಬಗ್ಗೆ ನಂದಿನಿ ಹಾಲಿನ ಮುಖ್ಯ ಕೇಂದ್ರದ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದರು.
ಆಹಾರ ಸುರಕ್ಷಾ ತಾಲ್ಲೂಕು ಅಧಿಕಾರಿ ಅರುಣ ಭಟ್ಟ ಕಾಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.