ADVERTISEMENT

ಶಿರಸಿ | ಮುರುಗಲು ಹಣ್ಣು ಬಂಪರ್‌ ಬೆಳೆ, ಕೊಯ್ಲಿನ ಚಿಂತೆಯಿಲ್ಲ

ಸಂಧ್ಯಾ ಹೆಗಡೆ
Published 24 ಏಪ್ರಿಲ್ 2020, 19:30 IST
Last Updated 24 ಏಪ್ರಿಲ್ 2020, 19:30 IST
ಮುರುಗಲು ಹಣ್ಣು ಸಂಸ್ಕರಿಸುತ್ತಿರುವ ಕೃಷಿಕ ರಮೇಶ ಹೆಗಡೆ ಕುಟುಂಬ
ಮುರುಗಲು ಹಣ್ಣು ಸಂಸ್ಕರಿಸುತ್ತಿರುವ ಕೃಷಿಕ ರಮೇಶ ಹೆಗಡೆ ಕುಟುಂಬ   

ಶಿರಸಿ: ಬೆಟ್ಟದ ಬೆಳೆಯಾಗಿರುವ ಮುರುಗಲ‌ನ್ನು ಕೃಷಿ ಬೆಳೆಯಾಗಿ ಬೆಳೆದಿರುವ ತಾಲ್ಲೂಕಿನ ಕಾನಗೋಡಿನ ಪ್ರಗತಿಪರ ಕೃಷಿಕ ರಮೇಶ ಹೆಗಡೆ ಅವರು ಈ ಬಾರಿ ಬಂಪರ್ ಫಸಲನ್ನು ಪಡೆದಿದ್ದಾರೆ.

ಮುರುಗಲು ಹಣ್ಣಿನ ಕೊಯ್ಲಿನ ಹಂಗಾಮಿನಲ್ಲೇ ಕೊರೊನಾ ಲಾಕ್‌ಡೌನ್‌ ಬಂದು, ಕೃಷಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಚಿಂತೆಯೂ ಅವರಿಗಿಲ್ಲ. ಓದುತ್ತಿರುವ ಮಕ್ಕಳು ಮನೆಗೆ ಬಂದಿದ್ದಾರೆ. ಹೀಗಾಗಿ ಕುಟುಂಬದ ಸದಸ್ಯರೆಲ್ಲ ಸೇರಿ ಮುರುಗಲು ಹಣ್ಣಿನ ಸಂಸ್ಕರಣೆಯಲ್ಲಿ ತೊಡಗಿದ್ದಾರೆ.

ಕೃಷಿಯಲ್ಲಿ ಹೊಸ ಪ್ರಯೋಗ ನಡೆಸುತ್ತ, ಸಣ್ಣ ಹಿಡುವಳಿಯಲ್ಲೂ ಗರಿಷ್ಠ ಆದಾಯ ಪಡೆಯಬಹುದೆಂದು ಸಾಬೀತುಪಡಿಸಿರುವ ರಮೇಶ ಹೆಗಡೆ, ಗದ್ದೆಯಂಚಿನಲ್ಲಿ 150ರಷ್ಟು ಮುರುಗಲು ಮರಗಳನ್ನು ಬೆಳೆಸಿದ್ದಾರೆ. ಇವುಗಳಲ್ಲಿ ಸುಮಾರು 10 ಮರಗಳು ಬಿಳಿ ಮುರುಗಲು ಜಾತಿಗೆ ಸೇರಿದವು. ನಾಲ್ಕೈದು ದಿನಗಳಿಂದ ಹಣ್ಣು ತುಂಬಿರುವ ಮರಗಳಿಂದ ಕೊಯ್ಲು ಆರಂಭಿಸಿರುವ ಅವರು, 10 ಕ್ವಿಂಟಲ್ ಹಣ್ಣು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

‘ಪ್ರತಿವರ್ಷ ಅರಣ್ಯ ಕಾಲೇಜು ಹಾಗೂ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ತಮ್ಮ ಕಲಿಕೆಯ ಭಾಗವಾಗಿ ಮುರುಗಲು ಹಣ್ಣನ್ನು ಖರೀದಿಸಿ, ಅವುಗಳಿಂದ ಕೋಕಂ ಜ್ಯೂಸ್ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಲಾಕ್‌ಡೌನ್ ಇರುವ ಕಾರಣ ಹಣ್ಣಿಗೆ ಬೇಡಿಕೆ ಬರಲಿಲ್ಲ. ಹೀಗಾಗಿ, ಔಷಧೀಯ ಮೌಲ್ಯವಿರುವ ಹಣ್ಣು ಹಾಗೂ ಬೀಜವನ್ನು ಪ್ರತ್ಯೇಕಿಸಿ, ಬಿಸಿಲಿನಲ್ಲಿ ಒಣಗಿಸಿಡುತ್ತಿದ್ದೇನೆ. ಬುಟ್ಟಿಗಟ್ಟಲೆ ಹಣ್ಣು ಕೊಯ್ಲು ಮಾಡಿ ತಂದರೆ, ಹೆಂಡತಿ, ಇಬ್ಬರು ಮಕ್ಕಳು ಅವುಗಳ ಸಂಸ್ಕರಣೆ ಮಾಡುತ್ತಾರೆ’ ಎನ್ನುತ್ತಾರೆ ರಮೇಶ ಹೆಗಡೆ.

‘ಒಂದು ಕ್ವಿಂಟಲ್ ಹಣ್ಣಿನಿಂದ 12ರಿಂದ 13 ಕೆ.ಜಿ ಒಣಸಿಪ್ಪೆ ಸಿಗುತ್ತದೆ. ಕಳೆದ ವರ್ಷ 1.10 ಕ್ವಿಂಟಲ್ ಸಿಪ್ಪೆಯನ್ನು ಕೆ.ಜಿ.ಯೊಂದಕ್ಕೆ ₹ 65ರ ದರದಲ್ಲಿ ಮಾರಾಟ ಮಾಡಿದ್ದೆ. ಕೂಲಿ ಕೊಟ್ಟು ಕೆಲಸ ಮಾಡಿದರೆ, ಕೆ.ಜಿ.ಯೊಂದಕ್ಕೆ ಕನಿಷ್ಠ ₹ 100 ದರ ಸಿಕ್ಕಿದರೆ ಮಾತ್ರ ಅನುಕೂಲ. ಈ ಬಾರಿ, ನಾವೇ ಎಲ್ಲ ಕೆಲಸವನ್ನು ನಿಭಾಯಿಸಿಕೊಂಡಿದ್ದಕ್ಕೆ ಬಂದಿದ್ದೆಲ್ಲ ಲಾಭವೇ. ಬೀಜಕ್ಕೂ ಒಳ್ಳೆಯ ದರವಿದೆ’ ಎನ್ನುತ್ತಾರೆ ಅವರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.