ಗೋಕರ್ಣ: ಈ ಭಾಗದಲ್ಲಿ ಬಹುಮುಖ್ಯವಾದ ಭತ್ತದ ಬೆಳೆಯ ಕಟಾವು ಮುಗಿದಿದೆ. ಈಗ ರೈತರು ತರಕಾರಿ ಬೆಳೆಯತ್ತ ಮುಖ ಮಾಡಿದ್ದಾರೆ. ಕೆಲವರು ಶೇಂಗಾ, ಗೆಣಸನ್ನೂ ಬೆಳೆಯುವ ಸಿದ್ಧತೆಯಲ್ಲಿದ್ದಾರೆ. ಭತ್ತದ ಕಟಾವಿನ ಬಳಿಕ ಲಾಭ, ನಷ್ಟದ ಲೆಕ್ಕಾಚಾರದೊಂದಿಗೆ ಮುಂದಡಿ ಇಟ್ಟಿದ್ದಾರೆ.
ಹೋಬಳಿಯಲ್ಲಿ ಬಹುತೇಕ ರೈತರು ತುಂಡು ಕೃಷಿಭೂಮಿ ಹಿಡುವಳಿದಾರರು. ಈ ಭಾಗದಲ್ಲಿ ಒಟ್ಟೂ 880.10 ಹೆಕ್ಟೇರ್ ಭತ್ತ ಬೆಳೆಯಲಾಗಿದೆ. ಒಟ್ಟು 395.95 ಕ್ವಿಂಟಲ್ ಭತ್ತದ ಬೀಜ ವಿತರಿಸಲಾಗಿದೆ. ಅದರಲ್ಲಿ 359.25 ಕ್ವಿಂಟಲ್ ‘ಜಯಾ’, ಉಳಿದ 29 ಕ್ವಿಂಟಲ್ ‘1001 ಎಮ್.ಟಿ.ಯು’ ಜಾತಿಯ ಭತ್ತದ ಬೀಜಗಳು ಸೇರಿವೆ. ಉಳಿದ ಕಡೆಗಳಿಗೆ ಹೈಬ್ರಿಡ್ ಹಾಗೂ ಅಭಿಲಾಷೆ ಬೀಜಗಳನ್ನು ನೀಡಲಾಗಿದೆ ಎಂದು ಕೃಷಿ ಇಲಾಖೆಯ ಪ್ರಭಾರ ಅಧಿಕಾರಿ ಆರ್.ಬಿ.ಗಾಂವ್ಕರ ತಿಳಿಸಿದ್ದಾರೆ.
ಈ ಭಾಗದಲ್ಲಿ ಯಾಂತ್ರೀಕೃತ ನಾಟಿಗೆ ರೈತರು ಹೆಚ್ಚಿನ ಒಲವು ತೋರಿಸಿದ್ದು, ಕೆಲವರು ಮಾತ್ರ ಸಸಿ ನಾಟಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಯಾಂತ್ರಿಕ ನಾಟಿಯಲ್ಲಿ ಕಡಿಮೆ ಖರ್ಚು ಹಾಗೂ ಕೂಲಿಯಾಳುಗಳ ಸಮಸ್ಯೆ ನಿಭಾಯಿಸಲು ಸಾಧ್ಯವಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಯುವಕರು ಕೃಷಿ ಕಾರ್ಯವನ್ನು ಬಿಟ್ಟು ಕಡಲತೀರಗಳಲ್ಲಿ ಇತರ ಉದ್ಯೋಗಕ್ಕೆ ಆಕರ್ಷಿತರಾಗಿದ್ದಾರೆ. ಇದೂ ರೈತರು ಸಾಂಪ್ರದಾಯಿಕ ಕೃಷಿಯಿಂದ ವಿಮುಖರಾಗಲು ಕಾರಣವಾಗಿದೆ.
ಕೃಷಿ ಇಲಾಖೆಯು ಈಗ ಶೇಂಗಾ ಬೀಜ ವಿತರಿಸಲು ಸಜ್ಜಾಗಿದೆ. ಅದರ ಕೃಷಿಗೆ ಬೇಕಾದ ಗೊಬ್ಬರವನ್ನೂ ವಿತರಿಸಲಾಗುತ್ತಿದೆ. ವಿವಿಧ ನಮೂನೆಯ ಕೃಷಿ ಉಪಕರಣಗಳು ಲಭ್ಯವಿದ್ದು, ಪ್ರೋತ್ಸಾಹ ದರದಲ್ಲಿ ರೈತರಿಗೆ ಕೊಡಲು ಕೃಷಿ ಇಲಾಖೆ ಯೋಜನೆ ರೂಪಿಸಿದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.