ಕಾರವಾರ: ಹೊನ್ನಾವರ ತಾಲ್ಲೂಕಿನ ಕಾಸರಕೋಡು ಟೊಂಕಾ ಪ್ರದೇಶದಲ್ಲಿ ಮೀನುಗಾರರ ಶೆಡ್ಗಳು ಮತ್ತು ಮನೆಗಳ ತೆರವಿಗೆ ಸ್ಥಳೀಯರು ಶನಿವಾರ, ಜೋರಾದ ಮಳೆಯಲ್ಲೇ ಭಾರಿ ಪ್ರತಿರೋಧ ತೋರಿದರು. ಇಲ್ಲಿ ಬಂದರು ನಿರ್ಮಿಸುತ್ತಿರುವ ಕಂಪನಿ ಮತ್ತು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಸಮುದ್ರದ ನೀರಿಗಿಳಿದು ಆಕ್ರೋಶ ಹೊರ ಹಾಕಿದರು.
ಟೊಂಕಾ ಪ್ರದೇಶದಲ್ಲಿ 'ಹೊನ್ನಾವರ ಪೋರ್ಟ್ ಕಂಪನಿ'ಯು ಬಂದರು ನಿರ್ಮಿಸುತ್ತಿದೆ. ಈ ಕಾಮಗಾರಿಯ ಭಾಗವಾಗಿ ಸಮುದ್ರ ಕಿನಾರೆ ಬದಿಯಲ್ಲಿ ರಸ್ತೆ ವಿಸ್ತರಣೆ ನಡೆಸಲು ಉದ್ದೇಶಿಸಲಾಗಿದೆ. ರಸ್ತೆಯ ಬದಿಯಲ್ಲಿ ಮನೆಗಳು ಮತ್ತು ಮೀನುಗಾರಿಕಾ ಬಲೆಗಳು, ಸಲಕರಣೆಗಳನ್ನು ಇಡುವ ಶೆಡ್ಗಳಿವೆ. ಅವುಗಳನ್ನು ಏಕಾಏಕಿ, ಯಾವುದೇ ಸೂಚನೆ ನೀಡದೇ ಯಂತ್ರಗಳ ಸಹಾಯದಿಂದ ತೆರವು ಮಾಡಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
'ಶನಿವಾರ ಬೆಳಿಗ್ಗೆಯೇ ನೂರಾರು ಪೊಲೀಸರು ಜಮಾಯಿಸಿದ್ದರು. ಈ ರೀತಿ ಬಲ ಪ್ರಯೋಗಿಸಿ ತೆರವು ಮಾಡುವುದನ್ನು ಖಂಡಿಸುತ್ತೇವೆ. ಮೀನುಗಾರರನ್ನು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ಮುಂದುವರಿಸಬಾರದು' ಎಂದು ಸ್ಥಳೀಯ ಗಣಪತಿ ತಾಂಡೇಲ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕೋವಿಡ್ ನಿಯಂತ್ರಣದ ಸಲುವಾಗಿ ಜಿಲ್ಲೆಯಲ್ಲಿ ವಾರಾಂತ್ಯದ ಲಾಕ್ಡೌನ್ ಜಾರಿಯಲ್ಲಿದೆ. ಹಾಗಿರುವಾಗ ನೂರಾರು ಜನರನ್ನು ಒಂದೇ ಕಡೆ ಸೇರುವಂಥ ಸನ್ನಿವೇಶ ಉಂಟು ಮಾಡಿದ್ದು ಯಾಕೆ? ಸೋಮವಾರದಿಂದ ಶುಕ್ರವಾರದವರೆಗೆ ಕೈಗೊಳ್ಳದ ಕಾಮಗಾರಿಯನ್ನು ಶನಿವಾರವೇ ಆರಂಭಿಸಲು ಮುಂದಾಗಿದ್ದು ಯಾಕೆ ಎಂದೂ ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.