ಕಾರವಾರ:ಮುದಗಾ ಪುನರ್ವಸತಿ ಕೇಂದ್ರದಿಂದ ಹಾರ್ವಾಡ ಪುನರ್ವಸತಿ ಕೇಂದ್ರಕ್ಕೆ ಹೋಗುವ ರಸ್ತೆಗೆ ಇನ್ನೂ ಡಾಂಬರೀಕರಣವಾಗಿಲ್ಲ. ಅದನ್ನು ಅಭಿವೃದ್ಧಿಪಡಿಸಿ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಉಮಾಕಾಂತ ಹರಿಕಂತ್ರ, ‘ಈ ಹಿಂದೆ ಸೀಬರ್ಡ್ ನಿರಾಶ್ರಿತರನ್ನು ಒಕ್ಕಲೆಬ್ಬಿಸಿದ ನಂತರ ನಿರ್ಮಾಣ ಮಾಡಲಾದ ಬಂದರು ಮೀನುಗಾರರ ಜೀವನಾಡಿಯಾಗಿದೆ.ನಿರಾಶ್ರಿತರ ಕಾಲೊನಿಯಿಂದ ಈ ಬಂದರಿಗೆ ತೆರಳಲು ರಸ್ತೆಯೊಂದನ್ನೂನಿರ್ಮಿಸಲಾಗಿತ್ತು. ಆದರೆ, ಅದು ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ರಸ್ತೆಯನ್ನು ಡಾಂಬರೀಕರಣ ಸೇರಿದಂತೆ ಪೂರಕ ಅಭಿವೃದ್ಧಿ ಮಾಡಿಲಿಲ್ಲ. 2019ರ ಸೆಪ್ಟಂಬರ್ನಲ್ಲಿಅತಿವೃಷ್ಟಿಯಿಂದ ಸಮುದ್ರದ ಅಬ್ಬರಕ್ಕೆ ಈ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಯಿತು. ಇದರಿಂದ ಸೀಬರ್ಡ್ ಕಾಲೊನಿಯಿಂದ ಬಂದರಿಗೆ ತೆರಳಲು ಮೀನುಗಾರರು ಪರ್ಯಾಯ ರಸ್ತೆ ಬಳಸುವಂತಾಗಿದೆ. ಈ ರಸ್ತೆ ಮೀನುಗಾರರಿಗೆ ತೀರಾಉಪಯುಕ್ತವಾಗಿತ್ತು. ಇಲ್ಲಿ ಬಸ್ ಸಂಚಾರ ಆರಂಭಿಸಲೂ ಯೋಚಿಸಲಾಗಿತ್ತು’ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಪ್ರಕೃತಿ ವಿಕೋಪ ಪರಿಹಾರದಡಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು. ಇಲ್ಲಿ ಕುಸಿದಿರುವ ಕಿರು ಸೇತುವೆಯ ಜಾಗದಲ್ಲಿ ಭದ್ರವಾದ ಸೇತುವೆ ನಿರ್ಮಿಸಿದರೆ ದೀರ್ಘ ಕಾಲದ ಉಪಯೋಗವಾಗಲಿದೆ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.