ADVERTISEMENT

ಕುಮಟಾ: ರೆಸಾರ್ಟ್ ತೆರವಿಗೆ ಮೀನುಗಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:42 IST
Last Updated 3 ಫೆಬ್ರುವರಿ 2026, 6:42 IST
ಕುಮಟಾ ತಾಲ್ಲೂಕಿನ ಅಳ್ವೆದಂಡೆ ಸಮುದ್ರ ತೀರದಲ್ಲಿರುವ ರೆಸಾರ್ಟ್
ಕುಮಟಾ ತಾಲ್ಲೂಕಿನ ಅಳ್ವೆದಂಡೆ ಸಮುದ್ರ ತೀರದಲ್ಲಿರುವ ರೆಸಾರ್ಟ್   

ಕುಮಟಾ: ತಾಲ್ಲೂಕಿನ ಕಲಭಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳ್ವೆದಂಡೆ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೊಂದರೆಯಾಗುವ ರೀತಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಸುಧಾಕರ ತಾರಿ ಅವರ ನೇತೃತ್ವದಲ್ಲಿ ಈಚೆಗೆ ಸ್ಥಳೀಯ ಮೀನುಗಾರರು ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್‌ನಿಂದಾಗಿ ಅಳ್ವೆದಂಡೆಯ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಕರನ್ನು ಹೊತ್ತ ದೊಡ್ಡ ವಾಹನಗಳು ವೇಗವಾಗಿ ಓಡಾಡುತ್ತವೆ. ರಸ್ತೆ ಬದಿ ಓಡಾಡುವ ಮಹಿಳೆಯರು, ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಹಿಂದೆ ಅಳ್ವೆದಂಡೆ ರಸ್ತೆ ಬದಿಯ ಹೊಳೆದಂಡೆಯಲ್ಲಿ ಮೀನುಗಾರರು ನಿರ್ಮಿಸಿಕೊಂಡ ಮೀನುಗಾರಿಕೆಯ ತಾತ್ಕಾಲಿಕ ಶೆಡ್‌ಗಳನ್ನು ಸ್ಥಳೀಯ ತಾಲ್ಲೂಕು ಪಂಚಾಯಿತಿ ಏಕಾಏಕಿ ರಾತ್ರಿ ಹೊತ್ತು ತೆರವುಗೊಳಿಸಿದೆ. ಅನಧಿಕೃತ ರೆಸಾರ್ಟ್‌ಗಳಿಗೂ ಅದೇ ಕಾನೂನು ಅಳವಡಿಸಬೇಕು. ಕಳೆದ ಮೂರು ವರ್ಷಗಳಿಂದ ಇಲ್ಲಿ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ‘ಅಳ್ವೆದಂಡೆ ಸಮುದ್ರ ತೀರದಲ್ಲಿ ನಿರ್ಮಿಸಿರುವ ರೆಸಾರ್ಟ್ ಬಗ್ಗೆ ಅದರ ಮಾಲೀಕರಾದ ಗುರುರಾಜ ಗಾವಡಿ ಎನ್ನುವವರು ಫಾರ್ಮ್ ಹೌಸ್ ನಿರ್ಮಾಣಕ್ಕೆ ಅನುಮತಿ ಪಡೆದ ಬಗ್ಗೆ ಕಂದಾಯ ಇಲಾಖೆ ಮಾಹಿತಿ ನೀಡಿದೆ. ಆದರೆ ರೆಸಾರ್ಟ್ ನಿರ್ಮಿಸಿದ ಜಾಗ ಯಾರಿಗೆ ಸೇರಿದ್ದು ಎನ್ನುವ ಬಗ್ಗೆ ಸರ್ವೆ ಮಾಡಿ ಗುರುತಿಸುವ ಬಗ್ಗೆ ಕಂದಾಯ ಇಲಾಖೆಗೆ ಗ್ರಾಮ ಪಂಚಾಯಿತಿ ಮನವಿ ಮಾಡಿದೆ. ರೆಸಾರ್ಟ್ ಇರುವ ಜಾಗ ಸರ್ಕಾರಕ್ಕೆ ಸಂಬಂಧಿಸಿದ್ದರೆ ರೆಸಾರ್ಟ್ ತೆರವಿನ ಜಂಟಿ ಕಾರ್ಯಾಚರಣೆಯಲ್ಲಿ ಗ್ರಾಮ ಪಂಚಾಯಿತಿ ಕೈ ಜೋಡಿಸಲಿದೆ ಎಂದರು.

ADVERTISEMENT

ಮೀನುಗಾರರಾದ ಸಂತೋಷ ಎರಾಗಿ, ಸಾಮು ಪಟಕುರೆ, ಚಂದ್ರಕಾಂತ ಠಾಕರ್, ಶ್ರೀಕಾಂತ ತದಡಿಕರ್, ಶರತ್ ಎರಾಗಿ, ದಯಾನಂದ ಕುಬಾಲ್, ವಿಠ್ಠಲ್ ಎರಾಗಿ, ವಿತೇಶ್ ಸೋಡನಕರ್, ಸುಬ್ರಹ್ಮಣ್ಯ ಪಟಕುರೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.