ADVERTISEMENT

‘ಮತ್ಸ್ಯಕ್ಷಾಮ ಪೀಡಿತ ಪ್ರದೇಶ’ ಘೋಷಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 12:45 IST
Last Updated 21 ನವೆಂಬರ್ 2020, 12:45 IST
ರಾಮ ಎಂ.ಮೊಗೇರ
ರಾಮ ಎಂ.ಮೊಗೇರ   

ಕಾರವಾರ: ‘ರಾಜ್ಯದ ಕರಾವಳಿಯಲ್ಲಿ ಎರಡು ವರ್ಷಗಳಿಂದ ಮೀನುಗಾರಿಕೆ ನಷ್ಟದಲ್ಲಿದೆ. ರಾಜ್ಯ ಸರ್ಕಾರವು ಮೂರೂ ಜಿಲ್ಲೆಗಳನ್ನು ಮತ್ಸ್ಯಕ್ಷಾಮ ಪೀಡಿತ ಪ್ರದೇಶವೆಂದು ಘೋಷಿಸಿ, ಮೀನುಗಾರರ ನೆರವಿಗೆ ಧಾವಿಸಬೇಕು’ ಎಂದು ಮೀನುಗಾರರ ರಾಷ್ಟ್ರೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಮ ಎಂ.ಮೊಗೇರ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎಲ್ಲ ರೀತಿಯ ಮೀನುಗಾರಿಕೆಗಳು ಸಂಕಷ್ಟದಲ್ಲಿವೆ. ಸಮುದ್ರದಲ್ಲಿ ಬಲೆಗೆ ಬೀಳುತ್ತಿರುವ ಮೀನಿನ ಸಂಖ್ಯೆ ಬಹಳ ಕಡಿಮೆಯಾಗಿದೆ. ಯಾಂತ್ರೀಕೃತ, ನಾಡದೋಣಿ, ಪಾತಿದೋಣಿ, ಬೀಡುಬಲೆ, ಪಟ್ಟೆಬಲೆ, ಮಾಠಬಲೆ ಮತ್ತು ಏಂಡಿ ಬಲೆ ಮಾದರಿಯ ಮೀನುಗಾರಿಕೆ ಸೊರಗಿವೆ. ಇವುಗಳನ್ನು ನಂಬಿರುವ ಮೀನುಗಾರರು, ದೋಣಿಗಳಲ್ಲಿ ಕೆಲಸ ಮಾಡುವ ಕಲಾಸಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

‘ಲಾಕ್‌ಡೌನ್ ಕಾರಣದಿಂದಮೀನುಗಾರರಿಗೆ ಆರು ತಿಂಗಳು ಆದಾಯವಿರಲಿಲ್ಲ. ಆ ಅವಧಿಗೆ ಪರಿಹಾರ ನೀಡಬೇಕು. ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲದ ಕಂತು ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು. ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿ ಪಡಿಸಬೇಕು. ಮೀನುಗಾರರ ಕುಟುಂಬಗಳ ಮಹಿಳೆಯರಿಗೆ ಬಡ್ಡಿ ರಹಿತವಾಗಿ ₹ 1 ಲಕ್ಷ ಸಾಲ ಕೊಡಬೇಕು. ನಾಡದೋಣಿಗಳಿಗೆ 400 ಲೀಟರ್ ಸೀಮೆಎಣ್ಣೆ ನೀಡಬೇಕು. ಕೆಲಸದಲ್ಲಿದ್ದಾಗ ಮೃತಪಟ್ಟ ಮೀನುಗಾರರ ಮೃತದೇಹ ಸಿಗದಿದ್ದರೂ ಅವರ ಕುಟುಂಬಗಳಿಗೆ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ‘ಮೀನುಗಾರರ ಸಮಸ್ಯೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡುವ ನಿರೀಕ್ಷೆಯಿದೆ’ ಎಂದರು.

ಈ ವೇಳೆ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ದಿನಕರ್ ಪಿ.ಬಿ, ವಿಠಲ ದಹಿಮನೆ, ಗಣಪತಿ ಹೊಳೆಗದ್ದೆ, ರಾಜು ಉಗ್ರಾಣಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.