ADVERTISEMENT

ಶಿರಸಿ: ನದಿಗೆ ಇಳಿದ ಒಂದೇ ಕುಟುಂಬದ ಐವರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 12:33 IST
Last Updated 17 ಡಿಸೆಂಬರ್ 2023, 12:33 IST
<div class="paragraphs"><p>ಶಾಲ್ಮಲಾ ನದಿಯ ಭೂತನಗುಂಡಿ ಪ್ರದೇಶ</p></div>

ಶಾಲ್ಮಲಾ ನದಿಯ ಭೂತನಗುಂಡಿ ಪ್ರದೇಶ

   

ಶಿರಸಿ: ತಾಲ್ಲೂಕಿನ ಭೈರುಂಬೆ ಸಮೀಪದ ಶಾಲ್ಮಲಾ ನದಿಯ ಭೂತನಗುಂಡಿ ಪ್ರದೇಶದಲ್ಲಿ ಸ್ನಾನಕ್ಕೆ ತೆರಳಿದ್ದ ನಗರದ ರಾಮನಬೈಲ್ ಹಾಗೂ ಕಸ್ತೂರಬಾನಗರದ ಒಂದೇ ಕುಟುಂಬದ ಐವರು ಕುಟುಂಬಸ್ಥರ ಎದುರು ಜಲ ಸಮಾಧಿಯಾದ ಘಟನೆ ಭಾನುವಾರ ನಡೆದಿದೆ.

ಶಿರಸಿ ನಗರದ ರಾಮನಬೈಲ್'ನ ಮಹಮದ್ ಸಲೀಂ (44), ಉಮರ್ ಸಿದ್ದೀಕ್ (14), ನಾಬಿಲ್ (22), ನಾದಿಯಾ ಶೇಖ್ (22) ಹಾಗೂ ಕಸ್ತೂರಬಾನಗರದ ಮಿಸಬಾ (21) ನೀರು ಪಾಲಾಗಿ ಮೃತಪಟ್ಟಿದ್ದಾರೆ.

ADVERTISEMENT

ಕುಟುಂಬದ 20 ಜನ ಸದಸ್ಯರು ಸೇರಿ ಪಿಕ್‌ನಿಕ್‌ಗಾಗಿ ಶಾಲ್ಮಲಾ ನದಿ ಪಾತ್ರದ ಭೂತನಗುಂಡಿ ಎಂಬ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ನಾದಿಯಾ ಶೇಖ್ ಹಾಗೂ ನಾಬಿಲ್ ಎಂಬುವವರು ಆಕಸ್ಮಿಕವಾಗಿ ನೀರಲ್ಲಿ ಬಿದ್ದ ಸಂದರ್ಭದಲ್ಲಿ ಅವರನ್ನು ಉಳಿಸಲು ಸಮೀಪವಿದ್ದ ಸಲೀಂ, ಉಮರ್ ಹಾಗೂ ಮಿಸಬಾ ನೀರಿನ ಗುಂಡಿಗೆ ಧಾವಿಸಿದ್ದರು. ಯಾರಿಗೂ ಈಜು ಬರದ ಕಾರಣ ರಕ್ಷಣೆಗೆ ತೆರಳಿದವರೂ ಗುಂಡಿಯ ಆಳಕ್ಕೆ ಹೋಗಿದ್ದಾರೆ ಎಂಬುದು ಕುಟುಂಬಸ್ಥರ ಮಾಹಿತಿಯಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಗಣೇಶ ಕೆ.ಎಲ್, ಸಿಪಿಐ ಪಿ. ಸೀತಾರಾಮ, ಪಿಎಸ್ಐ ಪ್ರತಾಪ, ಅಗ್ನಿ ಶಾಮಕದಳದ ಸಿಬ್ಬಂದಿ, ಗೋಪಾಲ ಗೌಡ ನೇತೃತ್ವದ ಲೈಫ್ ಗಾರ್ಡ್ ತಂಡ,ಸ್ಥ ಳೀಯ ಈಜುಗಾರರು ಆಗಮಿಸಿ ಕಾಣೆಯಾದವರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.