ಮುಂಡಗೋಡ: ಕಳೆದ ಹದಿಮೂರು ದಿನಗಳ ಹಿಂದೆ ಮೃತಪಟ್ಟರೂ, ಆತ್ಮ ಜೀವಂತವಾಗಿದೆ ಎಂದು ಬೌದ್ಧ ಬಿಕ್ಕುಗಳಿಂದ ಪೂಜಿಸಲಾಗುತ್ತಿದ್ದ, ಶೇರ್ ಗಾಡೆನ್ ಬೌದ್ಧ ಮಂದಿರದ ಹಿರಿಯ ಬೌದ್ಧ ಬಿಕ್ಕು ಯಶಿ ಫೋನತ್ಸೋ(90) ಅವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ನಡೆಯಲಿದೆ.
ಸೆ.9ರಂದು ಅವರು ಮೃತಪಟ್ಟಿದ್ದರು. ಆದರೆ ಅವರ ಮೃತದೇಹದಿಂದ ದುರ್ವಾಸನೆಯಾಗಲಿ, ಮೂಗಿನಿಂದ ದ್ರವವಾಗಲಿ ಬರುತ್ತಿಲ್ಲವೆಂಬ ಕಾರಣಕ್ಕೆ ಗುರುವಿನ ಆತ್ಮ ದೇಹ ಬಿಟ್ಟು ಹೋಗುವರೆಗೂ ಇತರ
ಬಿಕ್ಕುಗಳು ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದರು.
‘ಇತರ ಬೌದ್ಧ ಮುಖಂಡರು ಮೃತದೇಹವನ್ನು ಪರೀಕ್ಷಿಸಿದ್ದು, ಆತ್ಮವು ದೇಹದಿಂದ ಹೋಗಿದೆ ಎಂಬುದನ್ನು ದೃಢಪಡಿಸಿದ್ದಾರೆ. ಇದರಿಂದ ಶೇರ್ ಗಾಡೆನ್ ಬೌದ್ಧ ಮಂದಿರದ ಆವರಣದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಸಲಾಗುವುದು’ ಎಂದು ಬೌದ್ಧ ಬಿಕ್ಕು ಶೇರ್ ಗಾಡೆನ್ ಮೊನ್ಯಾಸ್ಟ್ರಿಯ ಗೆಶೆ ಜಾಂಗಚುಪ್ ನೊರ್ಬು ತಿಳಿಸಿದರು.
'ಮೃತಪಟ್ಟಿರುವ ಬೌದ್ಧ ಗುರು ಯಶಿ ಅವರು, ವಾರಾಣಸಿಯಲ್ಲಿ 20ಕ್ಕೂ ಹೆಚ್ಚು ವರ್ಷ ಬೌದ್ಧತತ್ವದ ಬೋಧನೆ ಮಾಡಿದ್ದಾರೆ. ಇಲ್ಲಿನ ಬೌದ್ಧ ಮಂದಿರದಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಧ್ಯಾನ ಮಾಡುತ್ತಲೇ, ಪ್ರಾಣ ತ್ಯಾಗ ಮಾಡಿದ್ದರು. ಆದರೆ, ಅವರ ಆತ್ಮ ಇನ್ನೂ ಜೀವಂತ ಇದ್ದಿದ್ದರಿಂದ, ಇಲ್ಲಿಯವರೆಗೂ ಕೋಣೆಯಲ್ಲಿ ಮಂಚದಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಇದ್ದ ಮೃತದೇಹದ ಮುಂದೆ ದೀಪ ಬೆಳಗಿಸಿ, ಪ್ರಾರ್ಥಿಸಲಾಗುತ್ತಿತ್ತು' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.