
ಕಾರವಾರ: ‘ಕಾಂಗ್ರೆಸ್ಗೆ ಮಹಾತ್ಮ ಗಾಂಧೀಜಿ ಅವರ ಬಗ್ಗೆ ನೈಜ ಕಾಳಜಿ ಇಲ್ಲ. ಅವರಿಗೆ ಕೇವಲ ಕಾಂಗ್ರೆಸ್ನ ಗಾಂಧಿ ಕುಟುಂಬದ ಹೆಸರು ಉಳಿಸುವಂತೆ ನೋಡಿಕೊಳ್ಳುವುದು ಮುಖ್ಯ. ಈ ಕಾರಣಕ್ಕೆ ಜಿ ರಾಮ್ ಜಿ ಯೋಜನೆ ವಿರೋಧಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಟೀಕಿಸಿದರು.
ಇಲ್ಲಿನ ಪಂಚತಾರಾ ಸಭಾಂಗಣದಲ್ಲಿ ಗುರುವಾರ ಬಿಜೆಪಿ ಗ್ರಾಮೀಣ ಮಂಡಲದಿಂದ ಜಿ ರಾಮ್ ಜಿ ಯೋಜನೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಅನಗತ್ಯವಾಗಿ ಜಿ ರಾಮ್ ಜಿ ಯೋಜನೆ ವಿರೋಧಿಸುತ್ತಿದೆ. ವಿಶೇಷ ಅಧಿವೇಶನವನ್ನೇ ನಡೆಸಿ ಯೋಜನೆ ವಿರುದ್ಧ ಮಾತನಾಡುವ ಕೆಲಸ ಮಾಡಿದ್ದಾರೆ. ಅವಿವೇಕತನದ ಮಾತುಗಳನ್ನು ಸದನದಲ್ಲಿ ಆ ಪಕ್ಷದ ನಾಯಕರು ಮಾತನಾಡಿದ್ದಾರೆ’ ಎಂದರು.
‘ದೇಶದ ಅಭಿವೃದ್ಧಿಗೆ ಜಿ ರಾಮ್ ಜಿ ಯೋಜನೆ ಅಗತ್ಯವಿದೆ. ಗ್ರಾಮೀಣ ಪ್ರದೇಶದ ಜನರಲ್ಲಿ ಆರ್ಥಿಕ ಶಕ್ತಿ ತುಂಬುವ ಅಂಶಗಳನ್ನು ಯೋಜನೆ ಒಳಗೊಂಡಿದೆ. ನರೇಗಾ ಯೋಜನೆಯಂತೆ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ‘ವಿಕೇಂದ್ರೀಕರಣ ವ್ಯವಸ್ಥೆಗೆ ಬಲತುಂಬಲು ಜಿ ರಾಮ್ ಜಿ ನೆರವಾಗಲಿದೆ. ರಾಜ್ಯಪಾಲರಿಗೆ ಅಗೌರವ ತೋರುವುದು, ಇಡೀ ರಾಜ್ಯ ಸರ್ಕಾರವೇ ಮುಂದೆ ನಿಂತು ಮಹಾತ್ವಾಕಾಂಕ್ಷಿ ಯೋಜನೆ ವಿರೋಧಿಸುವುದು ಗ್ರಾಮೀಣ ಜನರಿಗೆ ಮಾಡಿದ ದ್ರೋಹ’ ಎಂದರು.
ಜಿ ರಾಮ್ ಜಿ ಯೋಜನೆ ಜಾಗೃತಿಗೆ ಅಮದಳ್ಳಿಯ ಬಂಟದೇವ ಯುವ ಸಂಘದ ಕಲಾವಿದರು ಕಿರು ನಾಟಕ ಪ್ರದರ್ಶಿಸಿ, ಜಾಗೃತಿ ಗೀತೆ ಹಾಡಿದರು.
ಗಜಾನನ ಗುನಗಾ, ಸುನೀಲ ನಾಯ್ಕ ಸೋನಿ, ಸಂಜಯ ಸಾಳುಂಕೆ, ಸೂರಜ್ ದೇಸಾಯಿ, ಸುಭಾಷ ಗುನಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.