ADVERTISEMENT

ಗಂಗಾವಳಿ ನದಿಗೆ ತಾತ್ಕಾಲಿಕ ಮರಳಿನ ಒಡ್ಡು: ನಿಧಾನವಾಗುತ್ತಿರುವ ನೀರಿನ ಹರಿವು

ಗಣಪತಿ ಹೆಗಡೆ
Published 21 ಫೆಬ್ರುವರಿ 2026, 8:25 IST
Last Updated 21 ಫೆಬ್ರುವರಿ 2026, 8:25 IST
ಅಂಕೋಲಾ ತಾಲ್ಲೂಕಿನ ಹೊನ್ನಾಳಿ ಬಳಿ ಗಂಗಾವಳಿ ನದಿಯಲ್ಲಿ ಬೇಸಿಗೆ ವೇಳೆ ನೀರು ಸಂಗ್ರಹಕ್ಕೆ ತಾತ್ಕಾಲಿಕವಾಗಿ ಮರಳಿನ ಒಡ್ಡು ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದರು.
ಅಂಕೋಲಾ ತಾಲ್ಲೂಕಿನ ಹೊನ್ನಾಳಿ ಬಳಿ ಗಂಗಾವಳಿ ನದಿಯಲ್ಲಿ ಬೇಸಿಗೆ ವೇಳೆ ನೀರು ಸಂಗ್ರಹಕ್ಕೆ ತಾತ್ಕಾಲಿಕವಾಗಿ ಮರಳಿನ ಒಡ್ಡು ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದರು.   

ಕಾರವಾರ: ನಗರವೂ ಸೇರಿದಂತೆ ತಾಲ್ಲೂಕಿನ ಬಹುಭಾಗ, ನೆರೆಯ ಅಂಕೋಲಾ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಬೇಸಿಗೆ ವೇಳೆ ನೀರು ಸಂಗ್ರಹಕ್ಕೆ ಮರಳಿನ ತಾತ್ಕಾಲಿಕ ಒಡ್ಡು ನಿರ್ಮಾಣಕ್ಕೆ ಮುಂದಾಗಲಾಗಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗುವ ಕಾರಣಕ್ಕೆ ಮರಳಿನ ಚೀಲಗಳನ್ನು ಬಳಸಿ ಒಡ್ಡು ನಿರ್ಮಿಸುವ ಕೆಲಸವನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಡುತ್ತಿದೆ. ಆದರೆ, ಈ ಬಾರಿ ಅವಧಿಗೆ ಮುನ್ನವೇ ಒಡ್ಡು ನಿರ್ಮಾಣದ ಕೆಲಸ ನಡೆದಿದೆ.

‘ನದಿಯಲ್ಲಿ ನೀರಿನ ಹರಿವು ಸದ್ಯಕ್ಕೆ ತಕ್ಕಮಟ್ಟಿಗೆ ಇದೆ. ಆದರೆ, ಮಳೆಗಾಲ ಆರಂಭ ವಿಳಂಬವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಕಷ್ಟು ಮುಂಚಿನಿಂದಲೇ ನೀರು ಸಂಗ್ರಹಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು.‌

ADVERTISEMENT

ಗಂಗಾವಳಿ ನದಿಗೆ ಅಂಕೋಲಾ ತಾಲ್ಲೂಕಿನ ಹೊನ್ನಾಳಿ ಬಳಿ ಪಂಪ್‌ಹೌಸ್ ನಿರ್ಮಿಸಿದ್ದು, ಅಲ್ಲಿ ಸದ್ಯ ನೆಲಮಟ್ಟದಿಂದ 1.6 ಮೀಟರ್ ಎತ್ತರದವರೆಗೆ ನೀರು ಹರಿಯುತ್ತಿದೆ. ಎರಡು ತಿಂಗಳ ಮುಂಚೆ ಇದೇ ಜಾಗದಲ್ಲಿ 2 ಮೀಟರ್‌ಗೂ ಹೆಚ್ಚು ನೀರು ಸಂಗ್ರಹವಿತ್ತು. ದಿನವೊಂದಕ್ಕೆ ನೀರು ಪೂರೈಸಲುಕನಿಷ್ಠ 1 ಮೀಟರ್ ಎತ್ತರದಷ್ಟು ನೀರು ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಅಧಿಕಾರಿಯೊಬ್ಬರು ಹೇಳಿದರು.

ಹೊನ್ನಾಳಿಯಲ್ಲಿರುವ ಪಂಪ್‍ಹೌಸ್‍ನಿಂದ ನದಿಯ ನೀರನ್ನು ಎತ್ತಿ ಕಾರವಾರ ನಗರ, ಅಂಕೋಲಾ ಪಟ್ಟಣ, ಕದಂಬ ನೌಕಾನೆಲೆ, ಬಿಣಗಾದಲ್ಲಿರುವ ಗ್ರಾಸಿಮ್ ಇಂಡಸ್ಟ್ರೀಸ್, ಕಾರವಾರ ಮತ್ತು ಅಂಕೋಲಾದ 13 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇಷ್ಟೂ ಪ್ರದೇಶಗಳಿಗೆ ಪ್ರತಿನಿತ್ಯ ಸರಾಸರಿ 21 ದಶಲಕ್ಷ ಲೀಟರ್ ನೀರು ಅಗತ್ಯವಿದೆ.

ಗಂಗಾವಳಿ ನದಿಯಲ್ಲಿ ಸದ್ಯಕ್ಕೆ ನೀರಿನ ಒಳಹರಿವು ಉತ್ತಮವಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಮರಳಿನ ಒಡ್ಡು ನಿರ್ಮಿಸಲಾಗುತ್ತಿದೆ
ಶಿವರಾಮ ನಾಯ್ಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ
ನದಿ ತಿರುವು ಯೋಜನೆಯಾದರೆ...!
‘ಗಂಗಾವಳಿ ನದಿ ಅದಕ್ಕೆ ಮುನ್ನ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಬೇಡ್ತಿ ನದಿಯಲ್ಲಿ ಬೇಸಿಗೆ ಆರಂಭದಲ್ಲೇ ನೀರಿನ ಹರಿವು ಕಡಿಮೆಯಾಗುತ್ತಿದೆ. ಕರಾವಳಿ ಭಾಗಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವ ಆತಂಕ ಹಲವು ವರ್ಷದಿಂದ ಎದುರಾಗುತ್ತಿದೆ. ಒಂದು ವೇಳೆ ಬೇಡ್ತಿ ನದಿ ತಿರುವು ಯೋಜನೆ ಜಾರಿಯಾದರೆ ಪರಿಸ್ಥಿತಿ ಬಿಗಡಾಯಿಸುವುದು ನಿಶ್ಚಿತ. ಕರಾವಳಿ ಭಾಗಕ್ಕೆ ನೀರಿನ ಹರಿವು ಕಡಿಮೆಯಾಗುವ ಮೂಲಕ ಕುಡಿಯಲು ನೀರಿಗೆ ತತ್ವಾರ ಉಂಟಾದರೆ ಇನ್ನೊಂದೆಡೆ ಉಪ್ಪುನೀರು ಬಹುದೂರದವರೆಗೆ ನುಗ್ಗುತ್ತದೆ. ಇಲ್ಲಿನ ಕೃಷಿಭೂಮಿ ಪರಿಸರ ಜೀವವೈವಿಧ್ಯಕ್ಕೆ ಮಾರಕವಾಗಲಿದೆ’ ಎಂದು ಪರಿಸರ ಜೀವಶಾಸ್ತ್ರಜ್ಞ ವಿ.ಎನ್.ನಾಯಕ ಎಚ್ಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.