
ಹಳಿಯಾಳ: ಪಟ್ಟಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಆಯಾ ಬಡಾವಣೆಗಳಲ್ಲಿ ರತಿಮನ್ಮಥ ದೇವರ ಮೂರ್ತಿಯನ್ನು ಭಾನುವಾರ ರಾತ್ರಿ ಪ್ರತಿಷ್ಠಾಪಿಸಲಾಯಿತು.
ಪಟ್ಟಣದ ಜವಳಿ ಗಲ್ಲಿ ಗೌರಿಗುಡಿ ಹತ್ತಿರ, ಪೇಟೆ ಮುಖ್ಯ ಮಾರುಕಟ್ಟೆ, ಮೇದಾರ ಗಲ್ಲಿ, ಕಿಲ್ಲಾ ಓಣಿ, ಜಂಬ್ಯಾಳ ಗಲ್ಲಿ, ಕಸಬಾಗಲ್ಲಿ ಮತ್ತಿತರ ಬಡಾವಣೆಗಳಲ್ಲಿ ಕಾಮ ರತಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಬುಧವಾರದಂದು ಆಯಾ ಬಡಾವಣೆಗಳಲ್ಲಿನ ಕಾಮದಹನದ ನಂತರ ರಂಗಿನ ಆಟ ನಡೆಯಲಿದೆ. ಈ ಬಾರಿ ಕಳೆದ ಒಂದು ವಾರದಿಂದಲೇ ಮಕ್ಕಳು ಹೋಳಿ ಹುಣ್ಣಿಮೆ ಅಂಗವಾಗಿ ಕಾಮಣ್ಣನ ಪ್ರತಿಕೃತಿಯನ್ನು ತೆಗೆದುಕೊಂಡು ಅತಿ ಉತ್ಸಾಹದಿಂದ ಪ್ರತಿದಿನ ಬೆಳಿಗ್ಗೆ, ಸಂಜೆ ಬಡಾವಣೆಗಳಲ್ಲಿ ತೆರಳುತ್ತಿರುವುದು ಕಾಣ ಬರುತ್ತಿದೆ.
ಪ್ರತಿ ಬಡಾವಣೆಗಳಲ್ಲಿ ಕಾಡಿನಿಂದ ಬೃಹತ್ ಮರಗಳನ್ನು ಕಡೆದು ಗಣಿ ರೂಪದಲ್ಲಿ ಆಯಾ ಬಡಾವಣೆಗಳಲ್ಲಿ ನಿಲ್ಲಿಸಿ ಪೂಜಿಸುವ ಪದ್ಧತಿ ಇತ್ತು. ಕಳೆದ ಹತ್ತಾರು ವರ್ಷಗಳಿಂದ ಮರಗಳನ್ನು ಕಡಿದು ಪೂಜಿಸುವ ಪದ್ಧತಿಯನ್ನು ನಿಲ್ಲಿಸುವ ಗೋಸ್ಕರ ಅರಣ್ಯ ಇಲಾಖೆಯವರು ಪ್ರತಿ ವರ್ಷ ಹೋಳಿ ಹಬ್ಬದ ಒಂದು ವಾರದ ಮುಂಚೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಮೊಹಲ್ಲಾಗಳಲ್ಲಿನ ಪಂಚರನ್ನು ಕರೆಸಿ ಸಭೆ ನಡೆಸಿ ಅರಣ್ಯ ಇಲಾಖೆಯವರೇ ಆಯಾ ಬಡಾವಣೆಗಳಲ್ಲಿ ನೆಡಲು ವನಸ್ಪತಿ ಔಷಧಿಯುಕ್ತ ಸಸಿಯಾಗಲಿ ಬೇವಿನಗಿಡ, ಬನ್ನಿ, ಪತ್ರಿ, ಶಿವನಿ ಸಸಿಗಳನ್ನು ನೆಡಲು ಪೂರೈಸುತ್ತಾ ಬಂದಿದ್ದು ಕಳೆದ 4-5 ವರ್ಷಗಳಿಂದ ಕಾಡಿನಿಂದ ಮರಗಳನ್ನು ಕಡಿದು ತಂದು ಪೂಜಿಸುವುದು ಸಂಪೂರ್ಣ ನಿರ್ಮೂಲನೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.