ADVERTISEMENT

ಭಟ್ಕಳ: ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಹಾರಿಸಿದ್ದ ಹನುಮಧ್ವಜ ತಡರಾತ್ರಿ ತೆರವು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 6:06 IST
Last Updated 7 ಮಾರ್ಚ್ 2024, 6:06 IST
   

ಭಟ್ಕಳ: ತಾಲ್ಲೂಕಿನ ತೆಂಗಿನಗುಂಡಿ ಬಂದರಿನಲ್ಲಿ ಸೋಮವಾರ ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಹಾರಿಸಲಾಗಿದ್ದ ಹನುಮಧ್ವಜ ಮತ್ತು ಅಳವಡಿಸಲಾಗಿದ್ದ ವೀರ ಸಾರ್ವಕರ ನಾಮಫಲಕವನ್ನು ಬುಧವಾರ ಮಧ್ಯರಾತ್ರಿ ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಈ ಹಿಂದೆ ಕೂಡ ಹಾಕಲಾಗಿದ್ದ ನಾಮಫಲಕವನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜ.28ರಂದು ಜೆ.ಸಿ.ಬಿ ಮೂಲಕ ತೆರವುಗೊಳಿಸಿದ್ದರು. ನಾಮಫಲಕ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಜ.30ರಂದು ಹೆಬಳೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಬಂದರಿನ ಸಮೀಪ ನಾಮಫಲಕ ಅಳವಡಿಕೆಗೆ ಕಟ್ಟೆ ಪುನರ್ ನಿರ್ಮಿಸಿದ್ದರು.

ಸೋಮವಾರ ಕಾರ್ಯಕರ್ತರ ಭೇಟಿಗೆ ಭಟ್ಕಳಕ್ಕೆ ಬಂದಿದ್ದ ಸಂಸದ ಅನಂತಕುಮಾರ ಹೆಗಡೆ ಹೆಬಳೆಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ವೀರ ಸಾರ್ವಕರ ನಾಮಫಲಕ ಅಳವಡಿಸಿ, ಹನುಮ ಧ್ವಜ ಹಾರಿಸಿದ್ದರು.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆ ಸೇರಿ 21 ಜನರ ಮೇಲೆ ಮಂಗಳವಾರ ಪ್ರಕರಣ ಕೂಡ ದಾಖಲಾಗಿತ್ತು.

ಬುಧವಾರ ಮಧ್ಯರಾತ್ರಿ ಪೊಲೀಸ್ ಬಂದೊಬಸ್ತ್‌ನಲ್ಲಿ ಕಟ್ಟೆ ತೆರವು ಕಾರ್ಯಚರಣೆ ನಡೆಸಲಾಗಿದ್ದು, ಬಂದರು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.