ಜೊಯಿಡಾ (ಉತ್ತರ ಕನ್ನಡ):ಈ ಗ್ರಾಮಕ್ಕೆ ಹೋಗಲು ಕಚ್ಚಾ ರಸ್ತೆ ಇದೆ. ಮಳೆ ಬಂದರೆ ವಾಹನಗಳ ಸಂಚಾರವೇ ದುಸ್ತರವಾಗುತ್ತದೆ. ದಾರಿಗೆ ಮರ ಅಡ್ಡ ಬಿದ್ದರಂತೂ ಸಂಪರ್ಕ ಕಳೆದುಕೊಂಡಂತೆಯೇ ಆಗುತ್ತದೆ. ಯಾರಿಗಾದರೂ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಲಿ ಕಟ್ಟಲೇಬೇಕು.
ತಾಲ್ಲೂಕಿನ ‘ನಗರಿ’ ಗ್ರಾಮದದುಃಸ್ಥಿತಿಯಿದು. ಗ್ರಾಮಕ್ಕೆ ಕಾಡಿನ ಮಧ್ಯೆ ಸಾಗುವ ಕಚ್ಚಾರಸ್ತೆ ಮೇಲೆ 10 ದಿನಗಳ ಹಿಂದೆ ಬೃಹತ್ ಮರವೊಂದು ಬಿದ್ದಿತ್ತು. ಅದನ್ನುಅರಣ್ಯ ಇಲಾಖೆಯವರುಇನ್ನೂತೆರವು ಮಾಡಿಲ್ಲ. ಹೀಗಾಗಿ ವಾಹನ ಸಂಚಾರ ಸಾಧ್ಯವಾಗದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಗ್ರಾಮದ ತೆರೆಮಳೆ ಎಂಬಲ್ಲಿನ ಲಕ್ಷ್ಮೀ ದೇಸಾಯಿ (85) ಎಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಪುತ್ರ ಪ್ರಭಾಕರ ದೇಸಾಯಿ ಶನಿವಾರ ಜೊಯಿಡಾದ ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಯಿತು.
ಕೋಲಿಗೆ ಕಂಬಳಿಯನ್ನು ಜೋಲಿಯಂತೆ ಕಟ್ಟಿ ಅದರಲ್ಲಿ ಅಮ್ಮನನ್ನು ಮಲಗಿಸಿದರು. ಬಳಿಕ ತಮ್ಮ ಪರಿಚಯಸ್ಥರ ಜೊತೆಗೂಡಿ ಹೆಗಲ ಮೇಲೆ ಹೊತ್ತು, ಸುಮಾರು ಎರಡು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಹೆಜ್ಜೆ ಹಾಕಿಮುಖ್ಯರಸ್ತೆಗೆ ತಲುಪಿದರು. ನಂತರ ಅಲ್ಲಿಂದ ವಾಹನದಲ್ಲಿ ಜೊಯಿಡಾದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
‘ಈ ಹಳ್ಳಿಯಲ್ಲಿ ನಾಲ್ಕು ಮನೆಗಳಿವೆ.ಡಾಂಬರು ರಸ್ತೆ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ 20 ವರ್ಷಗಳಿಂದ ಹಲವು ಬಾರಿ ಮನವಿ ನೀಡಲಾಗಿದೆ. ಆದರೂನಮ್ಮಸಮಸ್ಯೆಯನ್ನು ಯಾರೂ ಬಗೆಹರಿಸುತ್ತಿಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನ ಹೋಗಲು ಸಾಧ್ಯವಾಗುವುದೇ ಇಲ್ಲ. ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲೂಅವಕಾಶವಿಲ್ಲದಂತೆ ಮರ ಬಿದ್ದಿದೆ’ ಎಂದು ಪ್ರಭಾಕರ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯಿತಿಯು ಮರ ತೆಗೆಯಲು, ಅರಣ್ಯ ಇಲಾಖೆಗೆ ತಿಳಿಸಿರುವುದಾಗಿ ಹೇಳುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
*'ತೆರೆಮಳೆ ರಸ್ತೆಯಲ್ಲಿ ಬಿದ್ದಿರುವ ಮರ ತೆಗೆಯುವಂತೆ ಗ್ರಾಮ ಪಂಚಾಯ್ತಿಯಿಂದಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ '
– ನಬಿಲಾಲ್ ಇನಾಮ್ದಾರ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.