ADVERTISEMENT

ಟ್ಯಾಟೂ ಕೇಂದ್ರದಲ್ಲಿ ರೋಗ ಹರಡುವ ಆತಂಕ

ಉದ್ಯಮವನ್ನು ಕಾನೂನುಬದ್ಧಗೊಳಿಸಲು ವೈದ್ಯಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 14:36 IST
Last Updated 15 ಜೂನ್ 2019, 14:36 IST
ಗೋಕರ್ಣದ ರಥಬೀದಿಯಲ್ಲಿರುವ ಟ್ಯಾಟೂ ಕೇಂದ್ರ.
ಗೋಕರ್ಣದ ರಥಬೀದಿಯಲ್ಲಿರುವ ಟ್ಯಾಟೂ ಕೇಂದ್ರ.   

ಗೋಕರ್ಣ: ಅವೈಜ್ಞಾನಿಕ ಹಾಗೂ ಸುರಕ್ಷಿತವಲ್ಲದ ಟ್ಯಾಟೂ (ಹಚ್ಚೆ) ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂಬಭೀತಿಯ ಕಾರಣ ಜಿಲ್ಲಾಡಳಿತವು ಅವುಗಳ ನಿಯಂತ್ರಣಕ್ಕೆ ಮುಂದಾಗಿದೆ. ಈ ಕುರಿತುಜಿಲ್ಲಾಧಿಕಾರಿ ಕಚೇರಿ ಹಾಗೂ ಆರೋಗ್ಯ ಇಲಾಖೆಗಳಿಂದ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.

ಈ ಸಂಬಂಧ ಇಲ್ಲಿ ಕೆಲವು ದಿನಗಳ ಹಿಂದೆ ವೈದ್ಯಾಧಿಕಾರಿ ಜಗದೀಶ ನಾಯ್ಕ ನೇತೃತ್ವದಲ್ಲಿ ಟ್ಯಾಟೂ ಉದ್ಯೋಗಿಗಳ ಸಭೆಹಮ್ಮಿಕೊಳ್ಳಲಾಗಿತ್ತು.

ಹೆಚ್ಚಿನ ಆದಾಯದ ದಂಧೆ:ಗೋಕರ್ಣದಲ್ಲಿ ಟ್ಯಾಟೂ ಉದ್ಯಮ ಹೆಚ್ಚಿನ ಆದಾಯದ ದಂಧೆಯಾಗಿದೆ. ವೈದ್ಯಾಧಿಕಾರಿ ನೀಡಿದ ಮಾಹಿತಿಯಂತೆ 25ಕ್ಕೂ ಹೆಚ್ಚು ಟ್ಯಾಟೂ ಕೇಂದ್ರಗಳಿವೆ. ರಥಬೀದಿ, ಮೇನ್ ಬೀಚ್, ಓಂ ಬೀಚ್ ಹಾಗೂ ಕುಡ್ಲೆ ಬೀಚ್‌ನಲ್ಲಿ ಟ್ಯಾಟೂ ಅಂಗಡಿಗಳನ್ನು ಹಾಕಲಾಗಿದೆ. 100ಕ್ಕೂ ಹೆಚ್ಚು ಜನಇದನ್ನು ಆದಾಯ ಮೂಲವನ್ನಾಗಿಆಶ್ರಯಿಸಿದ್ದಾರೆ.

ADVERTISEMENT

ಅವರೇ ನೀಡಿದ ಮಾಹಿತಿಯಂತೆ ವರ್ಷಕ್ಕೆ ಸರಾಸರಿಒಂದುಲಕ್ಷ ಜನ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಒಂದು ಅಂಗಡಿಯಲ್ಲಿ ದಿನಕ್ಕೆ ಸರಾಸರಿ 15 ಜನರಿಗೆ ಹಚ್ಚೆ ಹಾಕಲಾಗುತ್ತದೆ. ಎಲ್ಲಾ ಸೇರಿ ಪ್ರತಿ ದಿನ 300ರಿಂದ 400 ಜನ ಹಚ್ಚೆ ಹಾಕಲಾಗುತ್ತದೆ. ಒಂದು ಹಚ್ಚೆಗೆ ಕನಿಷ್ಠ ₹ 400 ತೆಗೆದುಕೊಳ್ಳಲಾಗುತ್ತದೆ. ಈ ದಂಧೆಯಲ್ಲಿ ಹೆಚ್ಚಿನ ಆದಾಯ ಇರುವುದರಿಂದ ವರ್ಷದಿಂದ ವರ್ಷಕ್ಕೆ ಅಂಗಡಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇವರಲ್ಲಿ ಕೆಲವರು ತಿಂಗಳಿಗೆ ₹ 20 ಸಾವಿರ ಬಾಡಿಗೆ ನೀಡುವವರೂ ಇದ್ದಾರೆ.

ಟ್ಯಾಟೂ ಅಂಗಡಿ ಮಾಲೀಕರು ಕಟ್ಟುನಿಟ್ಟಿನ ಕಾನೂನು ಕ್ರಮ ಅನುಸರಿಸಬೇಕಿದೆ. ನಿಯಮದಂತೆ ವೈದ್ಯಕೀಯ ಪ್ರಯೋಗಾಲಯದ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸ್ಥಳೀಯ ಪಂಚಾಯ್ತಿಯ ಜೊತೆಗೆ ಆರೋಗ್ಯ ಇಲಾಖೆಯ ಪರವಾನಗಿ ಕೂಡ ಕಡ್ಡಾಯವಾಗಿದೆ.ಆದರೆ, ಗೋಕರ್ಣದಲ್ಲಿ ಇದ್ಯಾವುದನ್ನೂ ಅನುಸರಿಸದಿರುವುದುಆತಂಕಕ್ಕೆ ಕಾರಣವಾಗಿದೆ.

ಒಂದು ಸಲ ಹಚ್ಚೆ ಹಾಕುವಾಗ ಕನಿಷ್ಠ 500 ಸಲ ಸೂಜಿಯಿಂದ ಚುಚ್ಚಬೇಕಾಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಹಚ್ಚೆ ಹಾಕಲು ಬಗೆ ಬಗೆಯ ಆಕಾರಗಳ ಸೂಜಿಯನ್ನು ಬಳಸಲಾಗುತ್ತದೆ. ಇದುನೇರವಾಗಿ ಟ್ಯಾಟೂ ಹಾಕಿಸಿಕೊಳ್ಳುವರ ರಕ್ತದೊಂದಿಗೆ ಸಂಪರ್ಕ ಹೊಂದುತ್ತದೆ.ಒಬ್ಬರಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸುವುದರಿಂದ ಎಚ್‌ಐವಿ, ಹೆಪಟೈಟಿಸ್–ಬಿ ರೋಗಗಳುಹರಡುವಸಾಧ್ಯತೆ ದಟ್ಟವಾಗಿದ ಎನ್ನುವುದು ಹಲವರ ಆತಂಕವಾಗಿದೆ.

ಇದನ್ನುಮನಗೊಂಡ ವೈದ್ಯಾಧಿಕಾರಿ ಜಗದೀಶ ನಾಯ್ಕ,ಟ್ಯಾಟೂ ಉದ್ಯಮಿಗಳಿಗೆ ಕಾನೂನಿನಂತೆ ಅವಶ್ಯವಿರುವ ಕ್ರಮಗಳನ್ನು ಜರುಗಿಸಲು ಸೂಚಿಸಿದ್ದಾರೆ. ಇದಕ್ಕೆ ಒಂದು ತಿಂಗಳ ಸಮಯ ನೀಡಿ ಉದ್ಯಮವನ್ನು ಸಕ್ರಮಗೊಳಿಸಲು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.