ADVERTISEMENT

ಉತ್ತರ ಕನ್ನಡದ ಕರಾವಳಿಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 7:01 IST
Last Updated 17 ಜೂನ್ 2020, 7:01 IST
ಕಾರವಾರದ ಕೆ.ಎಚ್.ಬಿ ಕಾಲೊನಿಯ ರಸ್ತೆಯಲ್ಲಿ ಮಳೆ ನೀರು ತುಂಬಿರುವುದು
ಕಾರವಾರದ ಕೆ.ಎಚ್.ಬಿ ಕಾಲೊನಿಯ ರಸ್ತೆಯಲ್ಲಿ ಮಳೆ ನೀರು ತುಂಬಿರುವುದು   

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಂಗಳವಾರ ತಡರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕೆಳಮಟ್ಟದಲ್ಲಿರುವ ಹಲವು ರಸ್ತೆಗಳು, ಬಡಾವಣೆಗಳು ಜಲಾವೃತವಾಗಿವೆ.

ಬುಧವಾರ ಬೆಳಿಗ್ಗೆ ಸ್ವಲ್ಪ ಬಿಡುವು ನೀಡಿದ್ದ ಮಳೆ, 9.30ರ ಬಳಿಕ ಬಿರುಸಾಗಿ ಸುರಿಯಲಾರಂಭಿಸಿತು. ಗುಡುಗು ಕೂಡ ಜೊತೆಯಾಯಿತು. ಇದರಿಂದ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವ ಮೀನುಗಾರ ಮಹಿಳೆಯರು, ತರಕಾರಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರು ಪರದಾಡುವಂತಾಯಿತು.

ಜಿಲ್ಲೆಯ ಜಲಾಶಯಗಳಿಗೆ ಒಳ ಹರಿವು ಹೆಚ್ಚಿದೆ. ಮಂಗಳವಾರದ ವರದಿಯಂತೆ ಸೂಪಾ ಜಲಾಶಯದಲ್ಲಿ 530.02 ಮೀಟರ್ (564 ಮೀಟರ್ ಗರಿಷ್ಠಮಟ್ಟ), ಕದ್ರಾ ಜಲಾಶಯದಲ್ಲಿ 29.75 ಮೀಟರ್ (34.50 ಮೀಟರ್ ಗರಿಷ್ಠ ಮಟ್ಟ), ಕೊಡಸಳ್ಳಿ ಜಲಾಶಯದಲ್ಲಿ 68.60 ಮೀಟರ್ (75.50 ಮೀಟರ್ ಗರಿಷ್ಠ ಮಟ್ಟ) ನೀರು ಸಂಗ್ರಹವಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಜಲಾಶಯಗಳು ಶೀಘ‌್ರವೇ ಭರ್ತಿಯಾಗುವ ಸಾ‌ಧ್ಯತೆಯಿದೆ.

ADVERTISEMENT

ಬುಧವಾರ ಬೆಳಿಗ್ಗೆ 7.30ಕ್ಕೆ ಅಂಕೋಲಾ ತಾಲ್ಲೂಕಿನ ಶೆಟಗೇರಿಯಲ್ಲಿ 23.7, ಬೇಲೆಕೇರಿಯಲ್ಲಿ 2.30ಕ್ಕೆ ಅತಿಹೆಚ್ಚು 22.7 ಸೆಂ.ಮೀ ಮಳೆಯಾಗಿದ್ದಾಗಿ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಲ್ಲಿ ದಾಖಲಾಗಿದೆ. ಹೊನ್ನಾವರ ತಾಲ್ಲೂಕಿನ ಬಳಕೂರಿನಲ್ಲಿ ಮಧ್ಯರಾತ್ರಿ 12.45ಕ್ಕೆ 12.6 ಸೆಂ.ಮೀ, ಕುಮಟಾ ತಾಲ್ಲೂಕಿನ ಹಿರೇಗುತ್ತಿಯಲ್ಲಿ ಬೆಳಗಿನ ಜಾವ 4.45ಕ್ಕೆ 17.4 ಸೆಂ.ಮೀ, ಹೊನ್ನಾವರ ತಾಲ್ಲೂಕಿನ ಕೊಡಾಣಿಯಲ್ಲಿ ಬೆಳಗಿನ ಜಾವ 4.15ಕ್ಕೆ 12.5 ಸೆಂ.ಮೀ ಮಳೆಯಾಗಿದೆ ಎಂದು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.