ADVERTISEMENT

ನೆರೆ ಸಂಕಷ್ಟ | ಕಾರವಾರ: ಶಾಲೆಗೆ ಅಪಾಯ ತಂದ ಅಬ್ಬರದ ಮಳೆ

ಶಾಲೆ ಪುನರಾರಂಭಕ್ಕೆ ಮುನ್ನ ಸುರಕ್ಷತೆ ಪರಿಶೀಲನೆ

ಗಣಪತಿ ಹೆಗಡೆ
Published 23 ಜುಲೈ 2024, 4:11 IST
Last Updated 23 ಜುಲೈ 2024, 4:11 IST
ಕೆಲ ದಿನಗಳ ಹಿಂದೆ ಅಬ್ಬರದ ಗಾಳಿ ಮಳೆಗೆ ಜೊಯಿಡಾ ತಾಲ್ಲೂಕಿನ ಬೀರಂಪಾಲಿಯಲ್ಲಿ ಅಂಗನವಾಡಿ ಕಟ್ಟಡದ ಮೇಲೆ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದಿತ್ತು
ಕೆಲ ದಿನಗಳ ಹಿಂದೆ ಅಬ್ಬರದ ಗಾಳಿ ಮಳೆಗೆ ಜೊಯಿಡಾ ತಾಲ್ಲೂಕಿನ ಬೀರಂಪಾಲಿಯಲ್ಲಿ ಅಂಗನವಾಡಿ ಕಟ್ಟಡದ ಮೇಲೆ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದಿತ್ತು   

ಕಾರವಾರ: ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು ಬಿರುಸಿನ ಗಾಳಿ–ಮಳೆಗೆ 191 ಶಾಲೆ ಮತ್ತು 94 ಅಂಗನವಾಡಿಗಳಿಗೆ ಹಾನಿ ಉಂಟಾಗಿದ್ದು ಅಪಾಯದ ಸ್ಥಿತಿಯಲ್ಲಿವೆ.

ನಿರಂತರ ಮಳೆಯ ಕಾರಣಕ್ಕೆ ಜಿಲ್ಲೆಯ ಶಾಲೆ, ಅಂಗನವಾಡಿಗಳಿಗೆ ಕಳೆದ ಒಂದು ವಾರದಿಂದಲೂ ರಜೆ ನೀಡಲಾಗಿದೆ. ಮೂರು ದಿನಗಳ ಹಿಂದಷ್ಟೆ ಜಿಲ್ಲೆಯ ಎಲ್ಲ ಶಾಲೆ, ಅಂಗನವಾಡಿಗಳ ಸುರಕ್ಷತೆ ಕುರಿತ ತಪಾಸಣೆ ನಡೆಸಲಾಗಿದ್ದು, ಹಾನಿಗೊಂಡ ಕಟ್ಟಡಗಳ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆಯಾಗಿದೆ.

ಮಳೆಗಾಲಕ್ಕೆ ಮುನ್ನ ನಡೆದ ದುರಸ್ತಿ, ನಿರ್ವಹಣೆಯ ಹೊರತಾಗಿಯೂ ಮಳೆಯ ರಭಸಕ್ಕೆ ಹಲವು ಶಾಲೆಗಳ ಗೋಡೆ, ಚಾವಣಿಗಳು, ಕಾಂಪೌಂಡ್ ಗೋಡೆಗಳಿಗೆ ಹಾನಿಯುಂಟಾಗಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಜಿಲ್ಲೆಯಾದ್ಯಂತ ಸುರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಳೆ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಶಾಲೆ ಮತ್ತು ಅಂಗನವಾಡಿಗಳ ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸಿ ವರದಿ ಸಲ್ಲಿಕೆಗೆ ಸೂಚಿಸಿದ್ದರು’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮಳೆಯಿಂದಾಗಿ ಚಾವಣಿ ಒಡೆದು ಸೋರುವಿಕೆ, ಗೋಡೆಯಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್.ಕುಕನೂರು ಹೇಳಿದರು.

‘ಮಳೆಗಾಲ ಆರಂಭಗೊಂಡಾಗಿನಿಂದ ಜುಲೈ 21ರ ವರೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ 160 ಶಾಲೆಗಳಿಗೆ ಹಾನಿ ಉಂಟಾಗಿವೆ. ಮರ ಬಿದ್ದು ಕೆಲ ಕಟ್ಟಡಗಳಿಗೆ ಹಾನಿ ಉಂಟಾಗಿದ್ದರೆ, ಮತ್ತೆ ಕೆಲವು ಸತತ ಮಳೆಯಿಂದ ಹಾನಿಗೆ ಒಳಗಾಗಿವೆ. ಗೋಡೆಗೆ ಬಿರುಕು ಬಿಟ್ಟಿರುವುದು, ಚಾವಣಿ ಒಡೆದಿರುವ ಹಾನಿ ಹೆಚ್ಚಿವೆ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ.ಬಸವರಾಜ ತಿಳಿಸಿದರು.

‘ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರೂ ಶಾಲೆಯ ಕಟ್ಟಡಗಳಿಗೆ ಹಾನಿ ಉಂಟಾದ ಪ್ರಮಾಣ ಕಡಿಮೆ ಇದೆ. ಕಾರವಾರ ಶೈಕ್ಷಣಿಕ ಜಿಲ್ಲೆಯ 31 ಶಾಲೆಗಳಿಗೆ ಹಾನಿಯುಂಟಾಗಿದ್ದಾಗಿ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಪ್ರತಿ ಶಾಲೆಯ ಶಿಕ್ಷಕರಿಂದಲೂ ಶಾಲೆಯ ಕೂಲಂಕಷ ತಪಾಸಣೆ ನಡೆಸಿ ವರದಿ ಸಲ್ಲಿಕೆಗೆ ಸೂಚಿಸಲಾಗಿತ್ತು’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಲತಾ ನಾಯಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆ ಅಂಗನವಾಡಿಗಳಲ್ಲಿ ತರಗತಿ ನಡೆಸದೆ ಸುರಕ್ಷಿತ ಸ್ಥಳಗಳಲ್ಲಿ ಪಾಠ ಮಾಡಬೇಕು. ಹಾನಿಗೀಡಾದ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮವಹಿಸಲಾಗುವುದು.

-ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ

‘ರಜೆ’ ಮಾಹಿತಿ ಕರೆಗಳೇ ಹೆಚ್ಚು

ಅಧಿಕ ಮಳೆಯಿಂದ ಜಿಲ್ಲೆಯ ಶಾಲೆ ಕಾಲೇಜುಗಳಿಗೆ ಕಳೆದ ಒಂದು ವಾರದಿಂದ ಸತತವಾಗಿ ರಜೆ ನೀಡಲಾಗುತ್ತಿದೆ. ಆಯಾ ದಿನದ ರಜೆಯನ್ನು ಹಿಂದಿನ ದಿನ ರಾತ್ರಿ ಘೋಷಿಸುತ್ತಿದ್ದ ಕಾರಣ ರಜೆಯ ಗೊಂದಲ ಪರಿಹರಿಸಿಕೊಳ್ಳಲು ಜಿಲ್ಲಾಡಳಿತದ ಸಹಾಯವಾಣಿಗೆ ಬಂದ ಕರೆಗಳ ಸಂಖ್ಯೆಯೇ ಹೆಚ್ಚಿದ್ದವು ಎಂದು ಮೂಲಗಳು ತಿಳಿಸಿವೆ. ಸಹಾಯವಾಣಿಗೆ ಭೂಕುಸಿತ ಮನೆಗಳಿಗೆ ನೀರು ನುಗ್ಗಿದ ಸಮಸ್ಯೆ ಸೇರಿದಂತೆ ಕಳೆದ ಒಂದು ವಾರದಲ್ಲಿ ಸುಮಾರು 450ಕ್ಕಿಂತ ಹೆಚ್ಚು ಕರೆಗಳು ಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.