ADVERTISEMENT

‘ಇಂಧನ ಹೊಂದಾಣಿಕೆ ದರ’ಕ್ಕೆ ಆಕ್ಷೇಪ

ವಿದ್ಯುತ್ ಬಿಲ್‌ನಲ್ಲಿ ಪ್ರತಿ ತಿಂಗಳೂ ಶುಲ್ಕ ವಸೂಲಿ: ಗ್ರಾಹಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:45 IST
Last Updated 20 ಜುಲೈ 2019, 19:45 IST
ಕಾರವಾರದಲ್ಲಿ ಶನಿವಾರ ಹೆಸ್ಕಾಂ ಎಇಇ ಪ್ರಕಾಶ ನಾಯ್ಕ ನೇತೃತ್ವದಲ್ಲಿ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಯಿತು
ಕಾರವಾರದಲ್ಲಿ ಶನಿವಾರ ಹೆಸ್ಕಾಂ ಎಇಇ ಪ್ರಕಾಶ ನಾಯ್ಕ ನೇತೃತ್ವದಲ್ಲಿ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಯಿತು   

ಕಾರವಾರ: ಇಂಧನ ದರದಲ್ಲಿ ಆಗುವ ಏರಿಳಿತದಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನುಸರಿದೂಗಿಸಲುಹೆಸ್ಕಾಂ ‘ಇಂಧನ ಹೊಂದಾಣಿಕೆ ದರ’ವನ್ನು (ಎಫ್‌ಎಸಿ) ವಿಧಿಸುತ್ತಿರುವುದುಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.ನಗರದ ಹೆಸ್ಕಾಂ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

‘ಪ್ರತಿ ತಿಂಗಳು ವಿದ್ಯುತ್ ಬಿಲ್‌ನಲ್ಲಿ ಎಫ್‌ಎಸಿ ಎಂದು ಶುಲ್ಕ ನಮೂದಿಸಲಾಗುತ್ತಿದೆ. ಗ್ರಾಹಕರು ಬಳಸಿದ ಪ್ರತಿ ಯುನಿಟ್‌ ವಿದ್ಯುತ್ ಆಧರಿಸಿ ದರವನ್ನುವಸೂಲಿ ಮಾಡಲಾಗುತ್ತಿದೆ. ನಾನು ಬಳಕೆ ಮಾಡಿದ ವಿದ್ಯುತ್‌ಗೆ ಶುಲ್ಕ ಪಾವತಿಸುತ್ತೇನೆ. ಆದರೆ, ಇಂಧನ ದರದ ಹೊಂದಾಣಿಕೆಗೆ ನಾನು ಯಾಕೆ ಪಾವತಿಸಲಿ? ಗ್ರಾಹಕರು ಬಳಕೆ ಮಾಡದ್ದಕ್ಕೂಹಣ ವಸೂಲಿ ಮಾಡುವ ಈ ನಿಯಮವನ್ನು ಒಪ್ಪಲಾಗದು’ ಎಂದು ಗ್ರಾಹಕರಾದ ಶಿವರಾಮ ಗಾಂವ್ಕರ್ ವಾದಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್ ನಾಯ್ಕ ಮತ್ತು ಸಿಬ್ಬಂದಿ ಗಣಪತಿ, ‘ಈ ದರವನ್ನು ಎಲ್ಲ ಎಸ್ಕಾಂಗಳಲ್ಲೂ ಗ್ರಾಹಕರಿಂದ ಪಡೆಯಲಾಗುತ್ತಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) 2013ರಲ್ಲಿ ಇದಕ್ಕೆ ಅನುಮತಿ ನೀಡಿದೆ. ಇದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಕೆಇಆರ್‌ಸಿಯಿಂದ ಬಂದಿರುವ ಆದೇಶವನ್ನು ನಾವು ಜಾರಿ ಮಾಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಎಷ್ಟು ಶುಲ್ಕ?: ಹೆಸ್ಕಾಂನಲ್ಲಿಪ್ರಸ್ತುತ ಪ್ರತಿ ಯುನಿಟ್ ವಿದ್ಯುತ್‌ಗೆ10 ಪೈಸೆ ಎಫ್‌ಎಸಿವಿಧಿಸಲಾಗುತ್ತಿದೆ. ಏ.1ರಿಂದ ಜಾರಿಯಾಗುವಂತೆ ಮತ್ತೆ ಏಳು ಪೈಸೆ ಹೆಚ್ಚಿಸಲಾಗಿದೆ. ಗ್ರಾಹಕರೀಗ 17 ಪೈಸೆಗಳಷ್ಟು ಹೆಚ್ಚುವರಿ ಹಣ ಪಾವತಿ ಮಾಡಬೇಕಿದೆ. ಇವುಗಳಿಂದ ಪ್ರತಿ ತಿಂಗಳೂ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತದೆ.ರಾಜ್ಯದ ಐದೂ ‘ಎಸ್ಕಾಂ’ಗಳಲ್ಲಿ ಮೂರು ತಿಂಗಳಿಗೊಮ್ಮೆ ಪರಿಷ್ಕೃತ ದರ ಜಾರಿಗೆ ಬರುತ್ತದೆ. ಈ ದರ ವಿಧಿಸುವ ರೀತಿಯೇ ಸರಿಯಲ್ಲ ಎಂಬುದು ಗ್ರಾಹಕರ ಆಕ್ಷೇಪವಾಗಿದೆ.

ಉಳಿದಂತೆ, ವಿದ್ಯುತ್ ಇಲ್ಲದಿದ್ದಾಗ ಇನ್‌ವರ್ಟರ್ ಮೂಲಕ ಮಿಕ್ಸರ್ ಗ್ರೈಂಡರ್ ಬಳಸಿದರೂ ವಿದ್ಯುತ್ ಮೀಟರ್ ಚಾಲೂ ಆಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಶಿವರಾಮ ಗಾಂವ್ಕರ್ ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಮನೆಯವೈರಿಂಗ್‌ನಲ್ಲಿ ಸಮಸ್ಯೆ ಇರಬಹುದು ಎಂದು ಸಮಜಾಯಿಷಿ ನೀಡಿದರು. ಆದರೆ, ಇದಕ್ಕೆ ಒಪ್ಪದ ಗ್ರಾಹಕರು, 10 ವರ್ಷಗಳಿಂದ ಬಳಕೆ ಮಾಡುತ್ತಿದ್ದರೂ ಈಗೇಕೆ ತೊಂದರೆ ಕಾಣುತ್ತಿದೆ ಎಂದು ಆಕ್ಷೇಪಿಸಿದರು. ಕೊನೆಗೆ ಹೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ಗೋಪ್ಯತೆ ಯಾಕೆ?:ಹೊಸ ವಿದ್ಯುತ್ ಮೀಟರ್ ಅಳವಡಿಸಿದಾಗ ಹಳೆಯ ಮೀಟರ್‌ನಲ್ಲಿದ್ದ ಮಾಪನ ಎಷ್ಟು ಎಂದು ಹೆಸ್ಕಾಂ ಸಿಬ್ಬಂದಿ ತಿಳಿಸುವುದಿಲ್ಲ. ಇದರಲ್ಲಿ ಗೋಪ್ಯತೆ ಯಾಕೆ ಎಂದು ಸಭೆಯಲ್ಲಿದ್ದ ಗ್ರಾಹಕರು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ತಾಲ್ಲೂಕು ಪಂಚಾಯ್ತಿ ಸದಸ್ಯ ಮಾರುತಿ ನಾಯ್ಕ, ‘ಹೊಸ ಮೀಟರ್ ಅಳವಡಿಸುವ ನೆಪದಲ್ಲಿ ಗ್ರಾಹಕರಿಗೆ ಮೋಸ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ’ ಎಂದು ದೂರಿದರು.

ಸಭೆಯಲ್ಲಿ ಹತ್ತಾರು ಗ್ರಾಹಕರು ಭಾಗವಹಿಸಿ ತಮ್ಮ ಅಹವಾಲು ಮಂಡಿಸಿ ಪರಿಹಾರ ಕಂಡುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.